ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯು ಕರ್ನಾಟಕದೊಂದಿಗೆ ವಿಲೀನವಾದ ಬಳಿಕ ಬುಡಕಟ್ಟು ಜನಾಂಗವಾದ ಕೊಡವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿ ಎನ್ ಸಿ) ಸಂಘಟನೆ ಆರೋಪಿಸಿದೆ.
ಸಂವಿಧಾನ ಪರಾಮರ್ಶೆ ಆಯೋಗದ ವರದಿಯನ್ವಯ ಕೊಡವರಿಗೆ ಭೂ ರಾಜಕೀಯ ಸ್ವಾಯತ್ತತೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಂದರ್ಭ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಈ ಆರೋಪ ಮಾಡಿದರು.
ನಾಚಪ್ಪ ಅವರ ನೇತೃತ್ವದಲ್ಲಿ ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರತಿಭಟನೆ ನಡೆಸಿದ ಸಂಘಟನೆಯ ಪ್ರಮುಖರು, ಸಂವಿಧಾನದ 338ನೇ ವಿಧಿಯನ್ನು ಜಾರಿಗೆ ತರಲು ರಾಷ್ಟ್ರೀಯ ಬುಡಕಟ್ಟು ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ನಾಚಪ್ಪ ಅವರು, ಕರ್ನಾಟಕ ರಾಜ್ಯದಲ್ಲಿ ಕೊಡಗು ವಿಲೀನವಾದ ನಂತರ ಕೊಡವರ ಎಲ್ಲಾ ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಹತ್ತಿಕ್ಕಲಾಗಿದೆ. ಕೊಡವ ಬುಡಕಟ್ಟು ಜನಾಂಗ ಮೂಲೆ ಗುಂಪಾಗುತ್ತಿದ್ದು, ಕೊಡಗನ್ನು ಕೇವಲ ಸಂಪನ್ಮೂಲ ಉತ್ಪಾದಿಸುವ ಕೇಂದ್ರವನ್ನಾಗಿ ಪರಿಗಣಿಸಲಾಗುತ್ತಿದೆ. ರಾಜ್ಯ ಸರಕಾರದ ಅಧಿಕಾರ ವರ್ಗ ಜನರಿಗೆ ಸೇವೆ ಸಲ್ಲಿಸುವ ಬದಲು ಔದ್ಯೋಗಿಕ ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ನಮ್ಮ ನೆಲ, ಭಾಷೆ, ಜಾನಪದ ಗುರುತು, ಸಾಂಸ್ಕೃತಿಕ ಪರಂಪರೆ, ಭೌಗೋಳಿಕ ನೆಲೆ ಮತ್ತು ಕೊಡವ ಮಾನವ ಸಂಪನ್ಮೂಲಗಳ ಬಗ್ಗೆ ಆಡಳಿತ ನಡೆಸುತ್ತಿರುವವರು ಗೌರವ ಹೊಂದಿಲ್ಲ ಎಂದು ನಾಚಪ್ಪ ಕಿಡಿಕಾರಿದರು.
2002 ರಲ್ಲಿ ಭಾರತದ ಸಂವಿಧಾನ ಪರಿಶೀಲನಾ ಆಯೋಗ ಶಿಫಾರಸ್ಸು ಮಾಡಿರುವಂತೆ ಸಂವಿಧಾನದ 371ನೇ ವಿಧಿಯಡಿಯಲ್ಲಿ, ರಾಜಕೀಯ ಸ್ವಾಯತ್ತತೆಯನ್ನು ನೀಡುವ ಮೂಲಕ ಕೊಡವರಿಗೆ ಭದ್ರತೆ ಕಲ್ಪಿಸಬೇಕು. ಸಂವಿಧಾನದ 25 ಮತ್ತು 26ನೇ ವಿಧಿಯಂತೆ ಸಿಖ್ಖರ ಕಿರ್ಪಾನ್ಗೆ ಸಮಾನವಾಗಿ ‘ಕೊಡವ ಜನಾಂಗೀಯ ಸಂಸ್ಕಾರ ಗನ್’ ಅನ್ನು ಸೇರಿಸಬೇಕು. ಸಂವಿಧಾನದ 371, 5 ನೇ ಮತ್ತು 6ನೇ ಶೆಡ್ಯೂಲ್ಗಳಡಿಯಲ್ಲಿ ಲೇಹ್ ಮತ್ತು ಲಡಾಖ್ ಸ್ವಾಯತ್ತ ಪ್ರದೇಶಗಳಿಗೆ ಸಮಾನವಾದ ರಾಜಕೀಯ ಸ್ವಾಯತ್ತತೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ವಿಶಿಷ್ಟವಾಗಿರುವ ಕೊಡವ ಜನಾಂಗ ಅಳಿವಿನಂಚಿನಲ್ಲಿದ್ದು, ಸಂವಿಧಾನದಲ್ಲಿ ಕೊಡವರನ್ನು ಅಧಿಕೃತವಾಗಿ ಬುಡಕಟ್ಟು ಜನರೆಂದು ಘೋಷಿಸುವ ಮೂಲಕ ಶಾಸನಬದ್ಧ ಖಾತ್ರಿಯನ್ನು ನೀಡಬೇಕು. ಎಸ್ಟಿ ಪಟ್ಟಿಯಲ್ಲಿ ಸೇರಿಸಲು ಅನುಕೂಲವಾಗುವಂತೆ ಎಮಿಕ್ ವಿಧಾನದೊಂದಿಗೆ ಕೊಡವ ಜನಾಂಗದ ಕುರಿತು ಸಮಗ್ರ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಮೂಲಕ ಸರಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಸಿಎನ್ಸಿ ಪ್ರಮುಖರಾದ ಬೊಟ್ಟಂಗಡ ಸವಿತಾ ಗಿರೀಶ್, ಅಜ್ಜಿನಿಕಂಡ ಇನಿತಾ ಮಾಚಯ್ಯ, ಪಟ್ಟಮಾಡ ಲಲಿತಾ ಗಣಪತಿ, ಅರೆಯಡ ಸವಿತಾ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್, ಬೇಪಡಿಯಂಡ ದಿನು ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡು ಹಕ್ಕೊತ್ತಾಯಗಳ ಪ್ರತಿಪಾದನೆಯ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ