ಬಯಲುಸೀಮೆ ಅಭಿವೃದ್ಧಿಗೆ ಬದ್ದ: ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ

ಹೊಸದಿಗಂತ ವರದಿ,ಚಿತ್ರದುರ್ಗ :

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ. ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗೋವಿಂದ ಕಾರಜೋಳರವರು ನಗರದಲ್ಲಿ ವಿವಿಧ ಸಮುದಾಯದ ಪ್ರಬುದ್ದರ ಮತ್ತು ಕೀ ಓಟರ‍್ಸ್ ಸಭೆ ನಡೆಸಿ ಮತ ಯಾಚಿಸಿದರು.

ಒಂದೊಂದು ಬೂತ್‌ನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮುನ್ನೂರಕ್ಕೂ ಹೆಚ್ಚು ಮತಗಳು ಪಕ್ಷಕ್ಕೆ ಸಿಗುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಮೂರನೆ ಬಾರಿಗೆ ನರೇಂದ್ರಮೋದಿರವರು ಗೆದ್ದು ದೇಶದ ಪ್ರಧಾನಿಯಾದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮೋದಿರವರ ಜನಪರ ಯೋಜನೆಗಳನ್ನು ಪ್ರತಿ ಮನೆ, ಮನೆಗೆ ಮುಟ್ಟಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ವಿನಂತಿಸಿದರು.
ಬೂತ್ ಮಟ್ಟದ ಬೈಠಕ್‌ಗಳಿಗೆ ಹೆಚ್ಚಿನ ಮಹತ್ವ ಇರುವುದರಿಂದ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹಿರಿಯ ನಾಗರೀಕರ ಮನಸ್ಸನ್ನು ಗೆಲ್ಲುವುದು ತುಂಬಾ ಮುಖ್ಯ. ಕುಟುಂಬದ ಎಲ್ಲಾ ಮತದಾರರು ಮತದಾನ ಮಾಡುವಂತೆ ಜಾಗೃತಿ ವಹಿಸಿ ಬೂತ್ ಗೆದ್ದರೆ ಚುನಾವಣೆ ಗೆದ್ದಂತೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು.

ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಏನು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೆನೋ ಅದನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿ ಮಧ್ಯ ಕರ್ನಾಟಕದ ಬಯಲುಸೀಮೆಯನ್ನು ಅಭಿವೃದ್ದಿಗೊಳಿಸುವುದಾಗಿ ವಾಗ್ದಾನ ಮಾಡಿದರು.

ಇದೇ ತಿಂಗಳ ೨೬ ರಂದು ನಡೆಯುವ ಚುನಾವಣೆಯಲ್ಲಿ ಯಾರು ಎಲ್ಲಿಯೇ ಇರಲಿ ಮತದಾನ ಮಾಡುವುದನ್ನು ಮಾತ್ರ ಮರೆಯಬಾರದು. ಅದರಂತೆ ನಿಮ್ಮ ಮನೆಯ ಅಕ್ಕಪಕ್ಕದಲ್ಲಿರುವವರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವೊಲಿಸಬೇಕೆಂದು ಮನವಿ ಮಾಡಿದರು.
ಪಟೇಲ್, ಗುಜ್ಜರ್, ಜೈನ್, ವಿಷ್ಣು, ವಿಶ್ವಕರ್ಮ, ಮರಾಠ, ಗಂಗಾ ಮತಸ್ಥ, ಆರ್ಯವೈಶ್ಯ ಸಮಾಜದ ಪ್ರಮುಖರನ್ನು ಭೇಟಿ ಮಾಡಿ ಮತಯಾಚಿಸಿದ ಗೋವಿಂದ ಕಾರಜೋಳರವರು ನಮ್ಮ ಪಕ್ಷ ಸಣ್ಣಸಣ್ಣ ಜಾತಿಗಳನ್ನು ಗುರುತಿಸಿ ಒಂದಲ್ಲ ಒಂದು ರೀತಿಯಲ್ಲಿ ಅಧಿಕಾರ ನೀಡುತ್ತಿದೆ. ಇದೇ ತಿಂಗಳ ಏ.೨೬ ರಂದು ನಡೆಯುವ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವುದರ ಮೂಲಕ ದೇಶದಲ್ಲಿ ಮತ್ತೊಮ್ಮೆ ನರೇಂದ್ರಮೋದಿರವರನ್ನು ಪ್ರಧಾನಿಯನ್ನಾಗಿ ಮಾಡುವಂತೆ ವಿನಂತಿಸಿದರು.

ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ವಕ್ತಾರ ನಾಗರಾಜ್ ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ಶಿವಣ್ಣಾಚಾರ್, ಶ್ರೇಣಿಕ್ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!