ಹೊಸದಿಗಂತ ಮಂಡ್ಯ :
ವಿಶ್ವವಿದ್ಯಾಲಯಗಳನ್ನು ಮುಚ್ಚಿತ್ತಿರುವ ಸರ್ಕಾರ, ಮುಚ್ಚಿರುವ ಬಾರ್ಗಳನ್ನು ತೆರೆಯಲು ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು.
ಮೈಸೂರು ವಿವಿಯೊಂದಿಗೆ ಮಂಡ್ಯ ವಿಶ್ವವಿದ್ಯಾಲಯ ವಿಲೀನ ವಿರೋಧಿಸಿ ನಗರದ ಸರ್ ಎಂ.ವಿ. ಪ್ರತಿಮೆ ಎದುರು ಬಿಜೆಪಿ-ಜೆಡಿಎಸ್ ಕಾರ್ಯಕರ್ತರಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಚ್ಚಿಹೋಗಿರುವ ಬಾರ್ಗಳನ್ನು ತೆರೆದು ತೆರಿಗೆ ಸಂಗ್ರಹಿಸುವಲ್ಲಿ ಮುಂದಾಗಿದೆ. ಆದರೆ ಜ್ಞಾನಾರ್ಜನೆಗೆ ಪೂರಕವಾಗಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಿರ್ಧಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯ ಉಪ ಸಮಿತಿ ಮಂಡ್ಯಕ್ಕೆ ವಿಶ್ವವಿದ್ಯಾಲಯ ಅಗತ್ಯವಿಲ್ಲ. ಚಾಮರಾಜನಗರಕ್ಕೂ ಅವಶ್ಯಕತೆ ಇಲ್ಲ. ಲಾಭದಾಯಕವಾಗಿಲ್ಲ ಎದು ವರದಿ ನೀಡಿದೆ. ಲಾಭ ಬರಬೇಕಾದರೆ ಬಾರ್ಗಳಿಗೆ ಕೊಟ್ಟು ಬಿಡಿ, ಆಗ ಒಳ್ಳೆಯ ಲಾಭ ಬರುತ್ತೆ. 5 ಸಾವಿರ ಮಂದಿ ಮಂಡ್ಯ ವಿವಿಯಲ್ಲಿ ವಿದ್ಯೆ ಕಲಿಯುತ್ತಿದ್ದಾರೆ. ಅಲ್ಲಿ ಬಾರ್ ಮಾಡಿದರೆ ಎಣ್ಣೆ ಹೊಡೆಯುವವರ ಸಂಖ್ಯೆ ಹೆಚ್ಚಾಗುತ್ತೆ. ಆಗ ಸರ್ಕಾರಕ್ಕೂ ಆದಾಯ ಬರುತ್ತೆ ಎಂದು ವ್ಯಂಗ್ಯವಾಡಿದರು.