ಕರಾವಳಿ ಜನರ ಸಮಸ್ಯೆ ಪರಿಹರಿಸಲು ಖಾರ್ಲ್ಯಾಂಡ್ ತಡೆಗೋಡೆ ನಿರ್ಮಾಣ: ರೂಪಾಲಿ ನಾಯ್ಕ

ಹೊಸದಿಗಂತ ವರದಿ ಅಂಕೋಲಾ:

ರೈತರ ಕೃಷಿ ಭೂಮಿಯನ್ನು ಉಪ್ಪು ನೀರಿನಿಂದ ರಕ್ಷಿಸಲು ಕಡಲ ತೀರಗಳ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸರ್ಕಾರ ಕರಾವಳಿ ಪ್ರದೇಶದಲ್ಲಿ ಖಾರ್ಲ್ಯಾಂಡ್ ತಡೆಗೋಡೆ ನಿರ್ಮಾಣಕ್ಕೆ ಆದ್ಯತೆ ನೀಡಿದೆ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ತಾಲೂಕಿನ ಬೆಳಂಬಾರದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ವತಿಯಿಂದ ಶೆಟಗೇರಿ, ವಂದಿಗೆ, ಬೊಬ್ರವಾಡ ಮತ್ತು ಬೆಳಂಬಾರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದ ಹಳ್ಳಕ್ಕೆ ಖಾರ್ಲ್ಯಾಂಡ್ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನರೆವೇರಿಸಿ ಮಾತನಾಡಿದರು. ಜನರು ಹಲವಾರು ವರ್ಷಗಳಿಂದ ಉಪ್ಪು ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದರು, ಬಾವಿಗಳಲ್ಲಿ ಉಪ್ಪು ನೀರು ಹೆಚ್ಚಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿತ್ತು ಇದೀಗ ಉತ್ತಮ ತಂತ್ರಜ್ಞಾನದ ತಡೆಗೋಡೆ ನಿರ್ಮಾಣದಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದರು.

ಕರಾವಳಿ ಭಾಗದಲ್ಲಿ ಸಮುದ್ರದ ಉಪ್ಪು ನೀರು ಕೃಷಿ ಭೂಮಿಗೆ ನುಗ್ಗಿ ಕೃಷಿ ಕಾರ್ಯಗಳನ್ನು ನಡೆಸಲು ಸಾಧ್ಯವಾಗದೇ ರೈತರು ತೊಂದರೆ ಅನುಭವಿಸುವಂತಾಗಿತ್ತು, ಇದೀಗ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಮಹತ್ವ ನೀಡುವ ಮೂಲಕ ಬಿಜೆಪಿ ಸರ್ಕಾರ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಒದಗಿಸಿದೆ ಎಂದು ಅವರು ಹೇಳಿದರು.

ಬೆಳಂಬಾರ ಗ್ರಾಮ ಪಂಚಾಯತ್ ಅಧ್ಯಕ್ಷ ನಾರಾಯಣ ಮಡಿವಾಳ, ಬೊಬ್ರವಾಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೀಮಾ ಸುಧೀರ ನಾಯ್ಕ, ಶೆಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ನಾಯಕ, ಪ್ರಮುಖರುಗಳಾದ ಚಂದ್ರಕಾಂತ ನಾಯ್ಕ, ಜಗದೀಶ ಖಾರ್ವಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!