ಹೊಸ ದಿಗಂತ ವರದಿ, ಬಳ್ಳಾರಿ:
ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಲಕ್ಷಾಂತರ ಭಕ್ತರ ಮಧ್ಯೆ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ, ಅದ್ದೂರಿಯಾಗಿ ನೆರವೇರಿತು.
ವಿಜಯನಗರ ಸಾಮ್ರಾಜ್ಯ ಕಾಲದ ವೈಶಿಷ್ಟ್ಯ ಹೊಂದಿರುವ, ಶಿವನ ವಾಹನ ನಂದಿಯ ಸ್ವರೂಪ ಹೊಂದಿದ ಶ್ರೀ ದೊಡ್ಡ ಬಸವೇಶ್ವರ ದೇಗುಲಕ್ಕೆ, ಮಂಗಳವಾರ ನಾನಾ ಕಡೆಯಿಂದ ಲಕ್ಷಾಂತರ ಭಕ್ತರ ದಂಡೇ ಹರಿದು ಬಂದಿತ್ತು. ಪ್ರತಿ ವರ್ಷ ಸಂಜೆ ನಡೆಯುತ್ತಿದ್ದ ರಥೋತ್ಸವ, ಪ್ರಸಕ್ತ ವರ್ಷ ರಥೋತ್ಸವ ದಿನದಂದು ಚಂದ್ರಗ್ರಹಣ ಬಂದ ಹಿನ್ನೆಲೆಯಲ್ಲಿ ದೇಗುಲ ಸಮಿತಿ ಅವರು ಹಾಗೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳಾದ ಹನುಮಂತಪ್ಪ ಅವರು ಪಟ್ಟಣದ ಗುರುಹಿರಿಯರ ಸಮ್ಮತಿ ಮೇರೆಗೆ ಮ.1.05 ನಿಮಿಷಕ್ಕೆ ಲಕ್ಷಾಂತರ ಭಕ್ತರ ಮಧ್ಯೆ ರಥೋತ್ಸವಕ್ಕೆ ಚಾಲನೆ ದೊರೆಯಿತು.
ರಥೋತ್ಸವ ಮುಂದೆ ಸಾಗುತ್ತಿದ್ದಂತೆ ನೆರೆದ ಲಕ್ಷಾಂತರ ಭಕ್ತರು ಹೂವು, ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.



