ಹೊಸ ದಿಗಂತ ವರದಿ, ಶಿವಮೊಗ್ಗ:
ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈಗ ಪ್ರತಿಭಟನೆ ಶುರು ಮಾಡಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಪಠ್ಯದಲ್ಲಿದ್ದ ಕುವೆಂಪು ಅವರ 8 ಪಾಠಗಳನ್ನು 7 ಕ್ಕೆ ಇಳಿಸಿದ್ದು ಸಿದ್ದರಾಮಯ್ಯ ಸರ್ಕಾರ ನೇಮಿಸಿದ್ದ ಬರಗೂರು ರಾಮಚಂದ್ರಪ್ಪ ಸಮಿತಿ. ಆಗ ಸಿದ್ದರಾಮಯ್ಯ ಅವರಿಗೆ ಇದು ಕುವೆಂಪು ಅವರಿಗೆ ಮಾಡುತ್ತಿರುವ ಅವಮಾನ ಅನ್ನಿಸಲಿಲ್ಲ. ರಾಮಾಯಣ ದರ್ಶನಂ ಪಾಠವನ್ನೇ ಕಿತ್ತು ಹಾಕಿದಾಗ ಅವಮಾನ ಅನ್ನಿಸಲಿಲ್ಲ. ಈಗ ಕುವೆಂಪು ಅವರ ಹೆಚ್ಚು ಲೇಖನ ಸೇರಿಸಿದಾಗ ಅವಮಾನ ಆಗಿದೆಯಾ ಎಂದು ಪ್ರಶ್ನಿಸಿದರು.
ನಾಡಗೀತೆ ತಿರುಚಿದ ಪ್ರಕರಣ 2017ರದ್ದು. ಆಗ ಇದ್ದಿದ್ದು ಸಿದ್ದರಾಮಯ್ಯ ಸರ್ಕಾರ. ನಾಡಗೀತೆ ತಿರುಚಿದವರ ಮೇಲೆ ಯಾವ ಕ್ರಮ ಕೈಗೊಳ್ಳದೇ ಈಗ ಅವರೇ ಪ್ರತಿಭಟನೆ ಮಾಡುತ್ತಿದ್ದಾರೆ. ತಿರುಚಿದ ನಾಡಗೀತೆ ರಚನೆ ಮಾಡಿದವರು ಯಾರು ಎಂದೂ ತನಿಖೆ ಮಾಡಲಿಲ್ಲ. ಆ ಗೀತೆಯನ್ನು ಫಾರ್ವರ್ಡ್ ಮಾಡಿದವರ ಮೇಲೆ ದೂರು ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆಗಲೇ ಬಿ ರಿಪೋರ್ಟ್ ಹಾಕಿದ್ದರು. ಸಿದ್ದರಾಮಯ್ಯ ತಲೇಲಿ ಏನಿದೆ ಎಂದು ಪ್ರಶ್ನಿಸಿದರು.