ಹೊಸದಿಗಂತ ವರದಿ ಬೆಳಗಾವಿ:
ಚಿಕ್ಕೋಡಿ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವರ್ಷಧಾರೆಯಿಂದ ರೈತರ ಮೊಗದಲ್ಲಿ ಹರ್ಷ ಮೂಡಿದೆ. ಕಳೆದ ಒಂದು ತಿಂಗಳಿನಿಂದ ಮಳೆ ಬೀಳದ್ದರಿಂದ ಬಿತ್ತನೆ ಮಾಡಿದ ಬೀಜ ಕಮರಿ ಹೋಗುವ ಸ್ಥಿತಿಯಲ್ಲಿತ್ತು.
ಎರಡು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ಎಲ್ಲೆಡೆ ಹಸಿರುಮಯ ವಾತಾವರಣ ಕಂಡು ಬರುತ್ತಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ, ದೂಧಗಂಗಾ, ವೇದಂಗಾ ಸೇರಿದಂತೆ ವಿವಿಧ ನದಿಗಳಲ್ಲಿ ಅಲ್ಪ ಪ್ರಮಾಣದ ನೀರು ಬಂದಿದ್ದು ಜನರಲ್ಲಿ ಸಂತಸ ಮನೆ ಮಾಡಿದೆ. ಕಳೆದ ಒಂದು ತಿಂಗಳಿನಿಂದ ಸುರಿಯಬೇಕಿದ್ದ ಮಳೆ ಬಾರದ್ದರಿಂದ ನದಿ, ಕೆರೆ, ಹಳ್ಳ ಕೊಳ್ಳಗಳು ಬತ್ತಿ ಹೋಗಿದ್ದವು. ಶುಕ್ರವಾರ ಮತ್ತು ಶನಿವಾರ ಎರಡು ದಿನಗಳಿಂದ ಬಿಟ್ಟೂ ಬಿಡದೇ ಮಳೆ ಬೀಳುತ್ತಿದೆ.
ಇದನ್ನೂ ಓದಿ:
ಧಾರಾಕಾರ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಜೋಡಕುರಳಿ ಗ್ರಾಮದಲ್ಲಿ ಗಂಗೂಬಾಯಿ ವರಾಳೆ ಎಂಬುವರರ ಮನೆ ಗೋಡೆ ಶನಿವಾರ ಬೆಳಗಿನ ಜಾವ ಕುಸಿದಿದೆ. ಮನೆಯಲ್ಲಿ ಎಲ್ಲರೂ ಬೇಗ ಎದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕಳೆದ ೪-೫ ದಿನಗಳಿಂದ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆ ಬೀಳುತ್ತಿದ್ದು, ಇನ್ನು 3-4 ದಿನಗಳಲ್ಲಿ ಕೃಷ್ಣಾ ನದಿಗೆ ನೀರು ಹರಿದು ಬರುವ ಸಾಧ್ಯತೆ ಇದೆ.



