ಹೊಸದಿಗಂತ ವರದಿ ಅಂಕೋಲಾ:
ಅಗ್ನಿ ಅನಾಹುತದಿಂದ ಸಗಟು ವ್ಯಾಪಾರದ ಕಿರಾಣಿ ಅಂಗಡಿ ಸಂಪೂರ್ಣ ಸುಟ್ಟು ಹೋದ ಘಟನೆ ಸೋಮವಾರ ಬೆಳಗ್ಗಿನ ಜಾವ ಪಟ್ಟಣದ ಪರ್ಲಕ್ಕಿಬೇಣ ತಿರುವಿನ ಬಳಿ ರಾಷ್ಟ್ರೀಯ ಹೆದ್ದಾರಿ 66 ಪಕ್ಕ ಸಂಭವಿಸಿದೆ.
ಚಂದ್ರಿಕಾ ಪ್ರಾವಿಸನ್ ಸ್ಟೋರ್ ಎಂಬ ಅಂಗಡಿಗೆ ಬೆಂಕಿ ತಗುಲಿ ಅಂಗಡಿಯಲ್ಲಿದ್ದ ಸಾಮಗ್ರಿಗಳು ಸುಟ್ಟು ಬಸ್ಮವಾಗಿದ್ದು ಅಂಗಡಿಯ ಗೋಡೆ, ಮೇಲ್ಛಾವಣಿ, ಪೀಠೋಪಕರಣಗಳು ಸುಟ್ಟು ಹೋಗಿ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ಬೆಳಿಗ್ಗಿನ ಜಾವ 4 ಗಂಟೆ ಸುಮಾರಿಗೆ ಅಂಗಡಿಗೆ ಬೆಂಕಿ ಹೊತ್ತಿ ಉರಿಯುತ್ತಿರುವುದು ಗಮನಿಸಿದವರು ಅಗ್ನಿಶಾಮಕ ದಳದ ಕಚೇರಿಗೆ ಕರೆ ಮಾಡಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟಿದ್ದಾರೆ. ಮೆಣಸಿನ ಹೊಗೆಯ ಘಾಟು, ಉರಿದು ಮೈಮೇಲೆ ಬೀಳುತ್ತಿರುವ ಅವಶೇಷಗಳ ನಡುವೆಯೂ ಅಂಗಡಿಯ ಒಳಗೆ ಹೋಗಿ ಬೆಂಕಿ ಆರಿಸುವ ಪ್ರಯತ್ನ ನಡೆಸಲಾದರೂ ಬೆಳಕು ಹರಿಯುವ ವರೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ. ಅಂಗಡಿಯಲ್ಲಿದ್ದ ಖಾದ್ಯ ತೈಲ, ತುಪ್ಪದ ಬಾಕ್ಸ್ ಗಳು ಬೆಂಕಿ ಇನ್ನಷ್ಟು ಉರಿಯಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.