ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮಾಧ್ಯಮ ಸಂಯೋಜಕರಾಗಿ ಹಿರಿಯ ಪತ್ರಕರ್ತ ಗುರುಲಿಂಗಸ್ವಾಮಿ ಕೆಲ ದಿನಗಳ ಹಿಂದೆ ದಿಢೀರ್ ಹೃದಯಾಘಾತಗೊಂಡು ನಿಧನರಾಗಿದ್ದರು.
ಇದೀಗ ಅವರ ಅಕಾಲಿಕ ನಿಧನದಿಂದಾಗಿ ಕಂಗಾಲಾಗಿದ್ದ ಕುಟುಂಬಕ್ಕೆ ಮಾನವೀಯತೆ ನೆಲೆಯಲ್ಲಿ, ಮೃತ ಗುರುಲಿಂಗಸ್ವಾಮಿ ಪತ್ನಿಗೆ ಗ್ರೂಪ್-ಸಿ ಹುದ್ದೆಯನ್ನು ನೀಡಿ ಸಿಎಂ ಆದೇಶಿಸಿದ್ದಾರೆ.
ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಮುಖ್ಯಮಂತ್ರಿಯವರ ಸಚಿವಾಲಯಕ್ಕೆ 115 ಗ್ರೂಪ್-ಸಿ ಗುತ್ತಿಗೆ ಹುದ್ದೆಗಳನ್ನು ನೇಮಕಕ್ಕೆ ಆದೇಶಿಸಲಾಗಿತ್ತು. ಈ ಹುದ್ದೆಗಳಲ್ಲಿ ಒಂದು ಹುದ್ದೆಯ ನೇಮಕಾತಿ ಬಾಕಿ ಉಳಿದಿತ್ತು. ಆ ಹುದ್ದೆಗೆ ಶ್ರೀಮತಿ ದೀಪ ಗುರುಲಿಂಗಸ್ವಾಮಿ ಹೆಚ್ ಬಿ ನೇಮಕ ಮಾಡಲು ಸರ್ಕಾರವು ತೀರ್ಮಾನಿಸಿದೆ ಎಂದಿದ್ದಾರೆ.
ಸರ್ಕಾರದ ತೀರ್ಮಾನದಂತೆ ದೀಪಾ ಗುರುಲಿಂಗಸ್ವಾಮಿ ಅವರನ್ನು, ಮುಖ್ಯಮಂತ್ರಿಗಳ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ಸಂಚಿತ ವೇತನ ರೂ.30,350ರಂತೆ ದಿನಾಂಕ 06-09-2022ರಿಂದ ಜಾರಿಗೆ ಬರುವಂತೆ ನೇಮಕ ಮಾಡಿಕೊಳ್ಳಲು ಆದೇಶಿಸಿದ್ದಾರೆ.