ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಗ್ಯಾನವಾಪಿ ಮಸೀದಿಯ ವೀಡಿಯೋ ಸಮೀಕ್ಷೆಯು ಇಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಿನ್ನೆ ಮಸೀದಿಯ ಬಹುಪಾಲು ಸರ್ವೇಕಾರ್ಯ ಮುಗಿದಿದ್ದು ಶೇಕಾಡಾ 65.ರಷ್ಟು ಪೂರ್ಣಗೊಂಡಿದೆ. ಇಂದು ವಿಡಿಯೋ ಸಮೀಕ್ಷೆ ಪೂರ್ಣಗೊಳ್ಳುವ ಸಂಭವವಿದೆ ಎಂದು ಹಿಂದೂ ಪರ ವಕೀಲ ಸುಭಾಷ್ ನಂದನ್ ಹೇಳಿದ್ದಾರೆ.
ನ್ಯಾಯಾಲಯ ನೇಮಿಸಿರುವ ಸಮಿತಿಯು ಸಮೀಕ್ಷೆ ನಡೆಸಲು ಆಗಮಿಸಿರುವುದರಿಂದ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇಂದು ನಂದಿಯ ಮುಂಭಾಗದಲ್ಲಿ ನಿರ್ಮಿಸಿರುವ ಬಾವಿಯಲ್ಲಿಯೂ ಸರ್ವೇ ಕಾರ್ಯ ನಡೆಯಲಿದೆ. ಬಾವಿಯಲ್ಲಿ ನೀರು-ನಿರೋಧಕ ಕ್ಯಾಮೆರಾವನ್ನು ಹಾಕುವ ಮೂಲಕ ಬಾವಿಯೊಳಗಿನ ದೃಶ್ಯಗಳ ವೀಡಿಯೋಗ್ರಫಿ ಮಾಡಲಾಗುತ್ತದೆ ಎಂದು ಮೂಲಗಳು ವರದಿ ಮಾಡಿವೆ.
ಸ್ವಯಂಭೂ ವಿಶ್ವನಾಥನ ಮಂದಿರದ ಮೇಲೆ ಮಸೀದಿಯನ್ನು ಕಟ್ಟಲಾಗಿದೆ ಎನ್ನಲಾಗಿದ್ದು ನಿತ್ಯ ಪೂಜೆಗೆ ಅವಕಾಶ ಮಾಡಿಕೊಡುವಂತೆ ಐವರು ಹಿಂದು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ವೀಡಿಯೋ ಸಮೀಕ್ಷೆಗೆ ಸೂಚಿಸಿತ್ತು, ಆದರೆ ಮಸೀದಿಯು ನಾಟಕೀಯವಾಗಿ ಅದನ್ನು ವಿರೋಧಿಸಿತ್ತು. ಈ ಆಕ್ಷೇಪದ ವಿರುದ್ದ ನ್ಯಾಯಾಲಯವು ಎರಡು ಕಮಿಷನರ್ ಗಳ ಮತ್ತೊಂದು ಸಮಿತಿ ರಚಿಸಿ ಸಂಪೂರ್ಣವಾಗಿ ವೀಡಿಯೋ ಚಿತ್ರೀಕರಿಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ಪ್ರಾರಂಭವಾಗಿ ಎರಡು ದಿನಗಳು ಕಳೆದಿದ್ದು ಇಂದು ಪೂರ್ಣಗೊಳ್ಳಲಿದ್ದು ನಾಳೆ ಸಮೀಕ್ಷೆಯ ವರದಿ ಸಲ್ಲಿಕೆಯಾಗುವ ಸಂಭವವಿದೆ.