April 19, 2026
Sunday, April 19, 2026
spot_img

ಕೊಡಗು ಜಿಲ್ಲೆಯಲ್ಲಿ ಆಲಿಕಲ್ಲು ಮಳೆ: ಗಾಳಿಯ ರಭಸಕ್ಕೆ ಹಾರಿದ ಮನೆಯ ಹೆಂಚು!

ಹೊಸ ದಿಗಂತ ವರದಿ, ಮಡಿಕೇರಿ/ಕುಶಾಲನಗರ:

ಕೊಡಗು ಜಿಲ್ಲೆಯ ಸೋಮವಾರ ಸಂಜೆ ಗುಡುಗು,‌ಸಿಡಿಲು ಗಾಳಿ ಮಳೆಯಾಗಿದ್ದು, ಹಲವೆಡೆ ಆಲಿಕಲ್ಲು ಮಳೆ‌ ಬಿದ್ದಿದೆ.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಸುರಿದ ಮಳೆ, ಶಿರಂಗಾಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅವಾಂತರ ಸೃಷ್ಟಿಸಿದೆ.

ಅಲ್ಲಿನ ಚಿಕ್ಕನಾಯಕನಹೊಸಳ್ಳಿ ಗ್ರಾಮದ ಹರೀಶ್ ಮತ್ತು ಫಾಲ್ಗುಣ ಸಹೋದರರ ಹಂಚಿನ‌‌ ಮನೆ‌‌ ಮೇಲೆ ತೆಂಗಿನ ಮರ ತುಂಡರಿಸಿ ಬಿದ್ದಿದ್ದು, ಗಾಳಿಗೆ ಹೆಂಚುಗಳು ಹಾರಿಹೋಗಿವೆ. ಟ್ರಾಕ್ಟರ್’ಗೆ ಹಾನಿಯಾಗಿದೆ.‌ ಹೆಂಚು ಹಾರಿಹೋದ ಪರಿಣಾಮ ಮನೆಯೊಳಗಿದ್ದ ಹೊಗೆಸೊಪ್ಪು, ಧವಸಧಾನ್ಯ ಮಳೆಯಿಂದ ಹಾನಿಯಾಗಿದೆ.

ಸಮೀಪದ ಎಸ್.ಹೆಚ್. ಸುಂದರ ಎಂಬವರ ಮನೆ ಹಾಗೂ ಕೊಟ್ಟಿಗೆ ಶೀಟ್ ಗಳು ಹಾರಿಹೋಗಿ ಮೂಟೆಗಳಲ್ಲಿ ಶೇಖರಿಸಿಟ್ಟಿದ್ದ ಭತ್ತ, ರಾಗಿ ತೊಯ್ದು ಹೋಗಿವೆ. ಘಟನೆಯಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ.

ಸ್ಥಳಕ್ಕೆ ಕಂದಾಯ ಇಲಾಖೆ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸುಂಟಿಕೊಪ್ಪ, ಏಳನೇ ಹೊಸಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದ್ದರೆ, ಗುಡ್ಡೆಹೊಸೂರು ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ‌ ಬಿದ್ದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !