ಹೊಸ ದಿಗಂತ ವರದಿ, ಹಳಿಯಾಳ :
ಹಳಿಯಾಳ ರಾಜಕೀಯದಲ್ಲಿ ಅತೀ ದೊಡ್ಡ ಬದಲಾವಣೆ ಇಂದು ನಡೆದಿದೆ. ರಾಜಕೀಯದಲ್ಲಿ ಯಾರೂ ಕಾಯಂ ಶತ್ರುಗಳಲ್ಲ ಮತ್ತೆ ಮಿತ್ರರೂ ಅಲ್ಲ ಅನ್ನುವ ವಿದ್ಯಮಾನ ನಡೆದಿದೆ. ರಾಜಕೀಯವಾಗಿ ಪರಮ ವೈರಿಗಳಾಗಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್.ಎಲ್.ಘೋಟ್ನೇಕರ್ ಮತ್ತು ಮಾಜಿ ಶಾಸಕ ಸುನೀಲ್ ಹೆಗಡೆ ಇಂದು ಆಕಸ್ಮಿಕ ಎನ್ನುವಂತೆ ಅಚ್ಚರಿಯ ನಡೆ ಇಟ್ಟಿದ್ದು ರಾಜಕೀಯ ಪಂಡಿತರೆಲ್ಲರ ಹುಬ್ಬೇರುವಂತೆ ಮಾಡಿದೆ.
ಮಾಜಿ ಶಾಸಕ ಸುನೀಲ್ ಹೆಗಡೆ ಮತ್ತು ಬಿಜೆಪಿ ತಾಲೂಕು ಅಧ್ಯಕ್ಷ ಗಣಪತಿ ಕರಂಜೇಕರ್ ರನ್ನು ಹಳಿಯಾಳದ ಹೊಟೇಲ್ ಒಂದರಲ್ಲಿ ಭೇಟಿಯಾದರು. ಈ ಹಿಂದೆ ಬಿಜೆಪಿಯ ಸಾಕಷ್ಟು ವರಿಷ್ಠರನ್ನು ಭೇಟಿಯಾಗಿದ್ದ ಘೋಟ್ನೇಕರ್ ಬಿಜೆಪಿ ಪಕ್ಷದ ಚುನಾವಣಾ ಟಿಕೆಟ್ ನ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಆದರೆ ಇಂದು ಹಠಾತ್ ನೆ ಗಣಪತಿ ಕರಂಜೇಕರ್ ರನ್ನು ಭೇಟಿಯಾದ ಘೋಟ್ನೇಕರ್ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಮನವಿ ಅರ್ಜಿ ಸಲ್ಲಿಸಿದರು.
ಹಳಿಯಾಳದ ಗಣಪತಿ ದೇವಸ್ಥಾನದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರನ್ನು ನೇರವಾಗಿ ಭೇಟಿಯಾಗಿ ಬಿಜೆಪಿ ಸೇರ್ಪಡೆಯಾಗುವ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಮತ್ತು ತಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳುವಂತೆ ಮನವಿ ಕೂಡ ಮಾಡಿದ್ದಾರೆ.ಅದಕ್ಕೆ ಪ್ರತಿಕ್ರಿಯಿಸಿದ ಸುನಿಲ್ ಹೆಗಡೆಯವರು ನಿಮ್ಮನ್ನು ಸೇರ್ಪಡೆ ಗೊಳಿಸಿ ಕೊಳ್ಳುವುದು ಪಕ್ಷದ ಹೈ ಕಮಾಂಡಗೆ ಬಿಟ್ಟ ವಿಚಾರ ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಹಳಿಯಾಳ ಮತಕ್ಷೇತ್ರದ ಜನತೆಗೆ ನಂಬಲಸಾಧ್ಯವಾಗಿದೆ. ಮತ್ತಿನ್ನೇನೆನು ರಾಜಕೀಯ ಬೆಳವಣಿಗೆ ತಮ್ಮ ಕ್ಷೇತ್ರದಲ್ಲಿ ಆಗಬಹುದೆನ್ನುವ ಕುತೂಹಲ ಜನತೆಗೆ ತುದಿಗಾಲ ಮೇಲೆ ನಿಲ್ಲಿಸಿದೆ.