ಹೊಸದಿಗಂತ ವರದಿ, ಅಂಜನಾದ್ರಿ
ಹನುಮ ಹುಟ್ಟಿದ್ದು ಅಂಜನಾದ್ರಿಯಲ್ಲಿಯೇ ಎಂದು ಸಾವಿರ ಬಾರಿ ಹೇಳುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ಹೇಳಿಕೆ ನೀಡುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆದರು.
ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಭೇಟಿ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಜನಾದ್ರಿ ಕ್ಷೇತ್ರವು ಐತಿಹಾಸಿಕ ವಾಗಿ ಕಿಷ್ಕಿಂದದಲ್ಲಿ ಇರುವುದರಿಂದ ಹನುಮ ಜನ್ಮಸ್ಥಳ ಅಂಜನಾದ್ರಿ ಆಗಿದೆ. ಸಾವಿರ ಬಾರಿ ಹೇಳುವೆ. ಇದರಲ್ಲಿ ಯಾವುದೇ ಗೊಂದಲ ಬೇಕಾಗಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಇದೆ. ವಿವಾದ ಹಾಗೂ ಚರ್ಚೆಗೆ ಅವಕಾಶ ಇಲ್ಲ. ನಮ್ಮ ನಂಬಿಕೆಯೇ ಘೋಷಣೆ. ವಿವಾದ ಬೇಕಾಗಿಲ್ಲ. ಭಾರತದ ಜನರೇ ನಂಬಿದ್ದು, ಪರ್ವತಕ್ಕೆ ಬರುತ್ತಿದ್ದಾರೆ ಎಂದರು.
ನಮ್ಮೆಲ್ಲರ ಆರಾಧ್ಯ ಧೈವ ಅಂಜನಾದ್ರಿ ಅಭಿವೃದ್ಧಿ ಗೆ ಬಿಜೆಪಿ ಬದ್ಧ. ಬಜೆಟ್ ನಲ್ಲಿ ಘೋಷಿಸಿದಂತೆ 100 ಕೋಟಿ ರೂ. ನೀಡಿದ್ದೇನೆ. ಯಾತ್ರಾ ಸ್ಥಳ ಹಾಗೂ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.
ರಾಷ್ಟ್ರೀಯ ಮಟ್ಟದಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ಒದಗಿಸಲಾಗುವುದು. ಅಭಿವೃದ್ಧಿ ಗೆ ಮಾಸ್ಟರ್ ಫ್ಲಾನ್ ರೂಪಿಸಲಾಗಿದೆ. ಆಸ್ಪತ್ರೆ, ವಸತಿ ನಿಲಯ ಸೇರಿ ಮೂಲಸೌಕರ್ಯ. ವೃದ್ಧರಿಗೆ ಸುಲಭವಾಗಿ ಬೆಟ್ಟ ಏರಲು ಅನುಕೂಲ ಮಾಡಿಕೊಡಲಾಗುವುದು. ಮುಂದಿನ ದಿನಗಳಲ್ಲಿ ರೋಪ್ ವೇ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುವುದು. ಅಂಜನಾದ್ರಿ ಸೇರಿ ಸುತ್ತಲಿನ ದೇವಸ್ಥಾನ ಹಾಗೂ ಪ್ರದೇಶಗಳ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಪುರಾತತ್ತ್ವ ಇಲಾಖೆ ವ್ಯಾಪ್ತಿಯ ಕ್ಷೇತ್ರಗಳನ್ನು ಬಿಟ್ಟು ಹಂಪಿ ಭಾಗದ ಸುತ್ತಮುತ್ತಲಿನ ಪಾರಂಪರಿಕ ತಾಣಗಳು ಮತ್ತು ಮೈಸೂರನ್ನು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಕ್ರ್ಯೂಟ್ ಮಾಡಲಾಗುವುದು. ಪ್ರವಾಸೋದ್ಯಮ ಕ್ಕೆ ಉತ್ತೇಜನ ನೀಡಲಾಗುವುದು.
ಭೂಸ್ವಾಧೀನ ಕ್ಕೆ 24 ಕೋಟಿ ರೂ. ಮೀಸಲಿಡಲಾಗಿದೆ. ರೈತರಿಗೆ ಯಾವುದೇ ರೀತಿಯಲ್ಲಿ ಅನಾನುಕೂಲ ಆಗದಂತೆ ಪರಿಹಾರ ನೀಡಲಾಗುವುದು ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ