ಹೊಸದಿಗಂತ ವರದಿ, ಗದಗ:
ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ ಅವರ ಅಸಹ್ಯಕರ ಹೇಳಿಕೆ ೧೭ ಕ್ಷೇತ್ರದ ಜನರಿಗೆ ಮಾಡಿದ ಅವಮಾನ ಎಂದು ಲೋಕೊಪಯೋಗಿ ಸಚಿವ ಸಿ.ಸಿ.ಪಾಟೀಲ ಕಿಡಿಕಾರಿದರು.
ಮಂಗಳವಾರ ಬಿ.ಕೆ.ಹರಿಪ್ರಸಾದ ಅವರು ೧೭ ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿ ಹೇಳಿಕೆ ನೀಡಿದ ಕುರಿತು ನಗರದಲ್ಲಿ ವಾಗ್ದಾಳಿ ನಡೆಸಿದ ಸಚಿವರು ಸುಸಂಸ್ಕೃತ ಸಮಾಜದ ರಾಜಕಾರಣಿಗಳು ಇಂತಹ ಹೇಳಿಕೆ ಹೇಳುವದಿಲ್ಲ, ೧೭ ಜನ ಶಾಸಕರು ಯಾಕೇ ಪಕ್ಷವನ್ನು ಬಿಟ್ಟು ಬಂದರು ಅನ್ನುವುದು ಅವರ ಪಕ್ಷದ ಶಾಸಕರನ್ನು ಕೇಳಿದರೆ ಗೊತ್ತಾಗುತ್ತದೆ. ಹರಿಪ್ರಸಾದ ಅವರ ಹೇಳಿಕೆ ಹೊಸದಲ್ಲ. ಮೂಲತಃ ಅವರು ಆ ಸಂಸ್ಕೃತಿಯಿಂದ ಬಂದವರು. ಅವರ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ. ಕಾಂಗ್ರೆಸ್ನಲ್ಲಿದ್ದ ಪ್ರಮುಖ ನಾಯಕರು ಬೇರೆ ಬೇರೆ ಪಕ್ಷದಿಂದ ಬಂದು ನಾಯಕರಾಗಿದ್ದಾರೆ. ಎಲ್ಲರೂ ಮೂಲತಃ ಕಾಂಗ್ರೆಸ್ನವರಲ್ಲ. ಅನಿವಾರ್ಯ ಕಾರಣಗಳಿಂದ ಪಕ್ಷಾಂತರ ಮಾಡಬೇಕಾಗುತ್ತೆ. ನಾವು ಜನತಾದಳದಲ್ಲಿ ಇದ್ದವರು ಈಗ ಬಿಜೆಪಿಗೆ ಬಂದಿದ್ದೆವೆ. ಸಿದ್ದರಾಮಯ್ಯ ಜನತಾದಳದಲ್ಲಿ ಇದ್ದವರು ಕಾಂಗ್ರೆಸ್ಗೆ ಹೋಗಿದ್ದಾರೆ. ಮೇಲ್ಮನೆ ಸದಸ್ಯರಾಗಿ ಬಿ.ಕೆ.ಹರಿಪ್ರಸಾದ ಅವರು ಈ ರೀತಿ ಅಸಭ್ಯ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಕಿಡಿ ಕಾರಿದರು.