Sunday, October 1, 2023

Latest Posts

ಕೂಜಿಗೇರಿ-ಕಾಜೂರು ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ: ಭಾರೀ ಫಸಲು ಹಾನಿ

ಹೊಸದಿಗಂತ ವರದಿ,ಶನಿವಾರಸಂತೆ:

ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಕೂಜಿಗೇರಿ, ಕಾಜೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗುತ್ತಿದೆ.
ರಾತ್ರಿ ವೇಳೆಯಲ್ಲಿ ಕಾಡಾನೆ ಹಿಂಡು ಗ್ರಾಮಗಳಲ್ಲಿ ಸಂಚರಿಸಿ ರೈತರ ಕಾಫಿ, ಬಾಳೆ, ತೆಂಗಿನ ತೋಟಗಳಿಗೆ ನುಗ್ಗಿ ತೆಂಗು, ಅಡಿಕೆ ಮರ, ಬಾಳೆ, ಕಾಫಿ ಗಿಡಗಳನ್ನು ಕೆಡವಿ ಬೀಳುಸುತ್ತಿರುವುದರಿಂದ ಫಸಲು ನಷ್ಟವಾಗುತ್ತಿರುವುದರಿಂದ ರೈತರು ಕಂಗಲಾಗಿದ್ದಾರೆ. ಪಕ್ಕದ ಯಸಳೂರು ಮೀಸಲು ಅರಣ್ಯದಿಂದ ಬರುವ ಕಾಡಾನೆಗಳ ಹಿಂಡು ದುಂಡಳ್ಳಿ, ಕೂಜಿಗೇರಿ, ಕಾಜೂರು ಮುಂತಾದ ಗ್ರಾಮಗಳಲ್ಲಿ ವಾರ ಗಟ್ಟಲೆ ಬೀಡುತ್ತಿದ್ದು, ರಾತ್ರಿ ವೇಳೆಯಲ್ಲಿ ರೈತರ ತೋಟ, ಹೊಲ-ಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಶನಿವಾರ ರಾತ್ರಿ ಕಾಡಾನೆ ಹಿಂಡು ಕೂಜಿಗೇರಿ ಗ್ರಾಮದ ರೈತರಾದ ಕೆ.ಎಂ.ನಾಗರಾಜು, ಕೆ.ಟಿ.ಈರಪ್ಪ, ಜಯಪ್ಪ, ನಾಗೇಶ್, ರಘು ಅವರುಗಳ ಕಾಫಿ, ತೆಂಗು, ಬಾಳೆ ತೋಟಕ್ಕೆ ನುಸುಳಿ ಫಸಲಿಗೆ ಬಂದಿದ್ದ ಬಾಳೆಗಿಡಗಳನ್ನು ತುಳಿದು ಧ್ವಂಸಗೊಳಿಸಿದೆ. ತೆಂಗಿನ ಮರಗಳನ್ನು ಮುರಿದು ಬೀಳಿಸಿದ್ದು, ಕಾಫಿ ಗಿಡಗಳನ್ನು ತುಳಿದು ಹಾಕಿದ್ದಲ್ಲದೆ ತೋಟದಲ್ಲಿ ನೀರಾವರಿಗಾಗಿ ಅಳವಡಿಸಿದ ಪೈಪ್‍ಗಳನ್ನು ತುಳಿದು ಹಾನಿಗೊಳಿಸಿವೆ. ಅಪಾರ ಪ್ರಮಾಣದಲ್ಲಿ ಫಸಲು ಹಾಗೂ ನೀರಾವರಿ ಉಪಕರಣಗಳು ನಷ್ಟಗೊಂಡಿರುವುದಾಗಿ ರೈತರು ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!