ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ವಿಧಾನಸಭಾ ಕ್ಷೇತ್ರದ (Hasana Politics) ಜೆಡಿಎಸ್ ಟಿಕೆಟ್ ಗೊಂದಲ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಇದೀಗ ಗದ್ದಲಕ್ಕೆ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಮಧ್ಯಪ್ರವೇಶ ಮಾಡಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ತಮ್ಮ ವಿರುದ್ಧ ಭವಾನಿ ರೇವಣ್ಣ ಸ್ಪರ್ಧೆ ಮಾಡಲಿ ಎಂದು ಶಾಸಕ ಪ್ರೀತಂ ಗೌಡ ಮಾಡಿದ್ದ ಸವಾಲು ಈಗ ಜೆಡಿಎಸ್ನಲ್ಲಿ ಕಿಡಿಯನ್ನೇ ಹೊತ್ತಿಸಿದೆ. ಶತಾಯಗತಾಯ ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂದು ಭವಾನಿ ರೇವಣ್ಣ ಪಣ ತೊಟ್ಟಿದ್ದಲ್ಲದೆ, ಕ್ಷೇತ್ರ ಪ್ರಚಾರವನ್ನೂ ಕೈಗೊಂಡಿದ್ದಾರೆ.
ಆದರೆ ಇತ್ತ ಎಚ್.ಡಿ. ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದು, ಎಚ್.ಪಿ. ಸ್ವರೂಪ್ಗೆ ಹಾಸನ ಟಿಕೆಟ್ ನೀಡುವ ಒಲವು ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಭವಾನಿಗೇ ಟಿಕೆಟ್ ಕೊಡಬೇಕೆಂದು ಪಟ್ಟುಹಿಡಿದಿದ್ದರು.
ಮಾಜಿ ಮುಖ್ಯಮಂತ್ರಿಯೂ ಆಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದ ಸುಮಾರು 300 ಪ್ರಮುಖ ಮುಖಂಡರ ಸಭೆಯನ್ನು ನಾಳೆ ಸಂಜೆ 4-30ಕ್ಕೆ ಬೆಂಗಳೂರಿನ ಜೆಪಿ ಭವನದಲ್ಲಿ ಆಯೋಜಿಸಿದ್ದರು. ಇಂದು ಬೆಳಿಗ್ಗೆ ಕೂಡ ಸಭೆ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಸಭೆ ನಡೆದರೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಗೊಂದಲ ಸೃಷ್ಟಿಯಾಗುವ ಆರೋಪ ಹಿನ್ನಲೆ ಯಾವುದೇ ಸಭೆ ನಡೆಸದಂತೆ ದೇವೇಗೌಡ ಅವರು ಸಭೆಯನ್ನೇ ರದ್ದುಮಾಡಿದ್ದಾರೆ.