ಹೊಸದಿಗಂತ ಡಿಜಿಟಲ್ ಡೆಸ್ಕ್:
2019 ರ ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ (Azam Khan) ಅವರನ್ನು ಉತ್ತರ ಪ್ರದೇಶದ (Uttar Pradesh) ನ್ಯಾಯಾಲಯ ಇಂದು (ಬುಧವಾರ) ದೋಷಮುಕ್ತಗೊಳಿಸಿದೆ.
ಪ್ರಧಾನಮಂತ್ರಿಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ್ದಕ್ಕಾಗಿ ಕಳೆದ ವರ್ಷ ಸಮಾಜವಾದಿ ನಾಯಕನನ್ನು ತಪ್ಪಿತಸ್ಥ ಎಂದು ಘೋಷಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ರಾಂಪುರ ನ್ಯಾಯಾಲಯವು ರದ್ದುಗೊಳಿಸಿತು.
ವಿಶೇಷ ನ್ಯಾಯಾಲಯವು ಖಾನ್ ಶಿಕ್ಷೆಯ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಅಂಗೀಕರಿಸಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಖಾನ್ ಪರ ವಾದಿಸಿದ ವಕೀಲ ವಿನೋದ್ ಶರ್ಮಾ, ದ್ವೇಷ ಭಾಷಣ ಪ್ರಕರಣದಲ್ಲಿ ನಮ್ಮನ್ನು ಖುಲಾಸೆಗೊಳಿಸಲಾಗಿದೆ, ನ್ಯಾಯ ಸಿಕ್ಕಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ಹೇಳಿದರು.
ಖಾನ್ ಅವರ ಅಸೆಂಬ್ಲಿ ಸದಸ್ಯತ್ವವನ್ನು ಅನರ್ಹಗೊಳಿಸಿದ ನಂತರ, ರಾಂಪುರ ಸದರ್ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ಬಿಜೆಪಿ ಅಭ್ಯರ್ಥಿ ಆಕಾಶ್ ಸಕ್ಸೇನಾ ಅವರು ಚುನಾವಣೆಯಲ್ಲಿ ಖಾನ್ ಅವರ ನಿಕಟವರ್ತಿ ಎಸ್ಪಿಯ ಅಸೀಮ್ ರಾಜಾ ಅವರನ್ನು ಪರಾಭವಗೊಳಿಸಿದರು.