ಹೊಸದಿಗಂತ ವರದಿ ಕಾರವಾರ:
ರೈಲಿನಲ್ಲಿ ಅಕ್ರಮವಾಗಿ ಹವಾಲಾ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ಕಾರವಾರದ ಶಿರವಾಡ ರೈಲ್ವೆ ಸ್ಟೇಷನ್ ನಲ್ಲಿ ಬಂಧಿಸಿ 2 ಕೋಟಿ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಚೇನ್ ಸಿಂಗ್ ಅಲಿಯಾಸ್ ಮನೋಹರ ಹೇಮ್ ಸಿಂಗ್ ಬಂಧಿತ ಆರೋಪಿಯಾಗಿದ್ದು ಈತ ಮುಂಬೈನಿಂದ ಮಂಗಳೂರು ಸಾಗುವ ಛತ್ರಪತಿ ಶಿವಾಜಿ ಟರ್ಮಿನಲ್ ಸಿ.ಎಸ್. ಟಿ ರೈಲ್ವೆ ಸಂಖ್ಯೆ 12133 ನಲ್ಲಿ ಮಂಗಳೂರು ಕಡೆ ಯಾವುದೇ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ.
ವ್ಯಕ್ತಿಯೋರ್ವ ಅನುಮಾನಾಸ್ಪದವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿರುವ ಕುರಿತಂತೆ ಬೇಲಾಪುರದಿಂದ ರೈಲ್ವೆ ಅಧಿಕಾರಿಯೋರ್ವರು ಕಾರವಾರ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿ ಭಾರೀ ಪ್ರಮಾಣದ ನಗದು ಹಣ ವಶಪಡಿಸಿಕೊಂಡಿದ್ದಾರೆ. ಟಿಕೇಟು ತೋರಿಸಲು ನಿರಾಕರಿಸಿದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ವಿಚಾರಣೆ ನಡೆಸಿದಾಗ ಆತ ಹಣ ಸಾಗಿಸುತ್ತಿರುವ ಕೃತ್ಯ ಬಯಲಿಗೆ ಬಂದಿದ್ದು 2 ಕೋಟಿ ರೂಪಾಯಿ ಭಾರತೀಯ ನಗದನ್ನು ವಶಪಡಿಸಿಕೊಂಡಿರುವುದಾಗಿ ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ವ್ಯಕ್ತಿಯ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿದಿದೆ.