ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ಪ್ರೇಮ ವೈಫಲ್ಯದಿಂದ ಬೇಸತ್ತ ಯುವಕನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬ ಏರಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಯುವತಿಯೊಂದಿಗೆ ಮದುವೆ ಆಗಬೇಕು ಎಂದು ಒತ್ತಾಯಿಸಿದ್ದ ಯುವಕ, ನಿರಾಕರಣೆ ಎದುರಾದ ಬಳಿಕ ಈ ಹೈಡ್ರಾಮಾ ನಡೆಸಿದ್ದಾನೆ.
ಮೂರು ವರ್ಷದ ಪ್ರೀತಿಗೆ ಬ್ರೇಕ್
ಸೋಮಶೇಖರ್ ಎಂಬ ಯುವಕ ಕಳೆದ ಮೂರು ವರ್ಷಗಳಿಂದ ಸ್ಥಳೀಯ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಇತ್ತೀಚೆಗೆ ಯುವತಿ ಮದುವೆಗೆ ಒಪ್ಪದೇ ಸಂಬಂಧ ಮುರಿಯಲು ಮುಂದಾಗಿದ್ದಾಳೆ. ಇದರಿಂದ ಆಕ್ರೋಶಗೊಂಡ ಯುವಕ, ಯುವತಿಯ ಮನೆಯ ಬಳಿ ಗಲಾಟೆ ನಡೆಸಿದ್ದಾನೆ.
ಇದನ್ನೂ ಓದಿ:
ಹೈಟೆನ್ಷನ್ ಕಂಬ ಏರಿ ಬೆದರಿಕೆ
ಗಲಾಟೆಯ ಬಳಿಕ ಮನೆ ಸಮೀಪದ ಹೈಟೆನ್ಷನ್ ಕಂಬ ಏರಿದ ಸೋಮಶೇಖರ್, “ಯುವತಿ ಬರುವವರೆಗೆ ಕೆಳಗೆ ಇಳಿಯುವುದಿಲ್ಲ” ಎಂದು ಹಠ ಹಿಡಿದಿದ್ದಾನೆ. ಈ ದೃಶ್ಯ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.
ಪೊಲೀಸರು, ಅಗ್ನಿಶಾಮಕ ದಳದ ಕಾರ್ಯಾಚರಣೆ
ಘಟನೆ ತಿಳಿದ ತಕ್ಷಣ ಆನೇಕಲ್ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಪೊಲೀಸರು ಸಾಕಷ್ಟು ಮನವೊಲಿಸಲು ಪ್ರಯತ್ನಿಸಿದರೂ ಯುವಕ ಕೆಳಗಿಳಿಯಲು ನಿರಾಕರಿಸಿದ್ದಾನೆ. ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಸುರಕ್ಷಿತವಾಗಿ ಕೆಳಗಿಳಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.



