ಮಂಡ್ಯದಲ್ಲಿ ಎಚ್ ಡಿಕೆ ಸ್ಪರ್ಧೆ: ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂಗಾಯ್ತು ಎಂದ ಚಲುವರಾಯಸ್ವಾಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಡ್ಯದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದು, ಈ ನಡೆಗೆ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮಂಡ್ಯದಿಂದ ಸಿಎಸ್‌ ಪುಟ್ಟರಾಜು ಅಭ್ಯರ್ಥಿ ಅಂತಾ ಹೇಳಿ ಇದೀಗ ತಾವೇ ಅಭ್ಯರ್ಥಿಯಾಗಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತೆ ಆಗಿದೆ ಎಂದು ವ್ಯಂಗ್ಯವಾಡಿದರು.

ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ, ಮೊದಲು ಸಿಎಸ್‌ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡ್ತಿದ್ರು. ಇದೀಗ ತಾವೇ ಅಭ್ಯರ್ಥಿ ಆಗಿದ್ದಾರೆ. ಒಳ್ಳೇ ಹುಡುಗಿ ಇದ್ದಾಳೆ ನಾನೇ ಮದುವೆ ಆಗ್ತೇನೆ. ಪುಟ್ಟರಾಜು ನಿನಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಅಂದಿದ್ದಾರೆ. ಒಂದು ತಿಂಗಳಿನಿಂದ ಅಳೆದು ತೂಗಿ ಹೆಸರು ಘೋಷಣೆ ಮಾಡಿದ್ದಾರೆ. ಹೀಗಾಗಿ ಮಂಡ್ಯ ಅಭ್ಯರ್ಥಿ ಎಂದು ಘೋಷಣೆ ಆದ ಬಳಿಕ ಹೋದ ಕಡೆಯಲ್ಲೆಲ್ಲ ಮಂಡ್ಯ ನನ್ನ ಕರ್ಮ ಭೂಮಿ ಅಂತಿದ್ದಾರೆ. ಮಂಡ್ಯ, ಹಾಸನ, ಕೋಲಾರ ಮೂರು ಆದ್ರೆ ಪರವಾಗಿಲ್ಲ. ಚಿಕ್ಕಬಳ್ಳಾಪುರಕ್ಕೂ, ತುಮಕೂರಿಗೂ ಹೋಗಿ ಬಂದಿದ್ದಾರೆ ಎಂದು ಗೇಲಿ ಮಾಡಿದರು.

ಪಾಪ ಪುಟ್ಟರಾಜು ದೇವಸ್ಥಾನಗಳನ್ನು ಸುತ್ತಿ ಬಂದ. ಆದರೆ ಈಗ ಹುಡುಗಿ ಚೆನ್ನಾಗಿದ್ದಾಳೆಂಬ ಕಾರಣಕ್ಕೆ ಕುಮಾರಸ್ವಾಮಿ ನಾನೇ ಮದುವೆ ಆಗ್ತೀನಿ ಅಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಸಂಸದೆ ಸುಮಲತಾರನ್ನು ಇದೇ ಕುಮಾರಸ್ವಾಮಿ ನಿಂದಿಸಿದ್ದರು ಈಗ ಸುಮಲತಾ ನನ್ನ ಸಹೋದರಿ ಇದ್ದಂಗ, ಅಕ್ಕ ಇದ್ದಂಗ ಅಂತಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಮಾತು ಆಡಬೇಕಿತ್ತು. ಸುಮಲತಾ ನನ್ನ ಸಹೋದರಿ ಅಲ್ವಾ ಅವರೇ ಗೆಲ್ಲಲಿ, ನನ್ನ ಮಗ ಗೆದ್ದರೂ ಒಂದೇ, ಅಕ್ಕ ಸುಮಲತಾ ಗೆದ್ದರೂ ಒಂದೇ ಎಂದಿದ್ರೆ ಪಾಪ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ಆದರೆ ಅಂದು ಬಾಯಿಗೆ ಬಂದಂತೆ ಮಾತಾಡಿದರು. ವೈಯಕ್ತಿಕ ತೇಜೋವಧೆ ಮಾಡಿದ್ರು. ಈಗ ಬಿಜೆಪಿ ಜೆಡಿಎಸ್ ಮೈತ್ರಿ ಆದ ಬಳಿಕ ಸುಮಲತಾ ಸಹೋದರಿ ಅಂತಾ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!