ಹೊಸದಿಗಂತ ವರದಿ ಕಲಬುರಗಿ:
ದೇವೆಗೌಡರ ಕುಟುಂಬವನ್ನು ಬೈ ದಿ ಫ್ಯಾಮಿಲಿ-ಫಾರ್ ದಿ ಫ್ಯಾಮಿಲಿ ಎಂಬ ಜೋಶಿ ಅವರ ಹೇಳಿಕೆಗೆ ಮಾಜಿ ಮುಖ್ಯಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. ಪ್ರಲ್ಹಾದ್ ಜೋಶಿ ಅವರೆ ನಮ್ಮ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಕುಮಾರಸ್ವಾಮಿ ಗರಂ ಆದರು.
ಬುಧವಾರ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಲ್ಹಾದ್ ಜೋಶಿ ಅವರೆ ನಿಮ್ಮ ಸಹೋದರ ಬ್ಯಾಂಕ್ಗೆ ವಂಚನೆ ಮಾಡಿರುವುದು ಗೊತ್ತಿಲ್ಲವೆ. ನಾನು ರಾಜ್ಯದ ಆರುವರೇ ಕೋಟಿ ಜನರನ್ನು ಕೂಡ ನನ್ನ ಕುಟುಂಬ ಎಂದು ಭಾವಿಸಿದ್ದೇನೆ. ಇಂತಹ ಹಿನ್ನಲೆ ನನ್ನ ಕುಟುಂಬಕ್ಕೆ ಇದೆ. ಇದನ್ನು ನೀವು ತಿಳಿದುಕೊಳ್ಳಿ ಎಂದ ಅವರು, ಬಿಜೆಪಿ ನಮ್ಮ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದರು.
ಗ್ರಾಮ ಪಂಚಾಯತ್ ಸದಸ್ಯ, ಶಾಸಕರು ಕೂಡಿ ಹಕ್ಕು ಪತ್ರ ಕೊಡುವ ಕೆಲಸ ಮಾಡಬೇಕು. ಆದರೆ ಇವರು ದೇಶದ ಪ್ರಧಾನಿಯನ್ನು ಕರೆದುಕೊಂಡು ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಮಹದಾಯಿ ವಿಚಾರದಲ್ಲಿ ನಾನು ಏನೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ ಎಂಬುದನ್ನು ಹುಬ್ಬಳ್ಳಿಯಲ್ಲಿ ಮಾತಾಡುತ್ತೇನೆ.
ಕಾಂಗ್ರೆಸ್ ಪಾದಯಾತ್ರೆ ಅದು ಅವರ ಪಕ್ಷದ ಯಾತ್ರೆ. ಅದೆನೋ ಪೇ ಸಿಎಂ ಎಂದು ಹೋಗುತ್ತಿದ್ದಾರೆ, ಹೋಗಲಿ. ಆದರೆ ಈಗ ಪ್ರಜಾಧ್ವನಿ ಎಂದು ಹೊರಟಿದ್ದು, ಇದು ಅವರ ಪಕ್ಷದ ಕಾಯ೯ಕ್ರಮ, ಮಾಡಲಿ ತಪ್ಪೇನಿದೆ ಎಂದರು.