ದೇಹಕ್ಕೆ ಆಹಾರ, ನೀರು ಎಷ್ಟು ಮುಖ್ಯವೋ, ನಿದ್ರೆಯೂ ಅಷ್ಟೇ ಅಗತ್ಯ. ಪ್ರತಿದಿನ 7–8 ಗಂಟೆಗಳಷ್ಟು ನಿದ್ರೆ ಮಾಡಿದರೂ ಬೆಳಿಗ್ಗೆ ಎದ್ದಾಕ್ಷಣವೇ ದಣಿವು, ದಿನವಿಡೀ ಆಯಾಸ ಕಂಡುಬಂದರೆ ಅದನ್ನು ಸಾಮಾನ್ಯ ಅಂತ ತೆಗೆದುಕೊಳ್ಳಬಾರದು. ಇದು ದೇಹದಲ್ಲಿ ಯಾವುದೋ ಪೌಷ್ಟಿಕಾಂಶದ ಕೊರತೆಯ ಸೂಚನೆಯಾಗಿರಬಹುದು.
ಅನಿಮಿಯಾ – ಮೌನ ಶತ್ರು
ಭಾರತದಲ್ಲಿ ಅನೇಕ ಮಹಿಳೆಯರು ಹಾಗೂ ಪುರುಷರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಾರೆ. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ ರಕ್ತದ ಮೂಲಕ ಜೀವಕೋಶಗಳಿಗೆ ಆಮ್ಲಜನಕ ಸರಿಯಾಗಿ ತಲುಪುವುದಿಲ್ಲ. ಇದರ ಪರಿಣಾಮವಾಗಿ ನಿರಂತರ ದಣಿವು, ಶಕ್ತಿಯ ಕೊರತೆ ಉಂಟಾಗುತ್ತದೆ.
ಕಾಣಿಸಬಹುದಾದ ಲಕ್ಷಣಗಳು
- ಸದಾ ಆಯಾಸ, ದೌರ್ಬಲ್ಯ
- ತಲೆತಿರುಗು, ತಲೆನೋವು
- ಚರ್ಮ ಬಿಳಿಯಾಗುವುದು, ಹೊಳಪು ಕಡಿಮೆಯಾಗುವುದು
- ಎದೆ ಒತ್ತಡ ಅಥವಾ ಉಸಿರಾಟದ ತೊಂದರೆ
- ಉಗುರುಗಳು ಸುಲಭವಾಗಿ ಮುರಿಯುವುದು
ಈ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ.
ಆಹಾರದಲ್ಲೇ ಪರಿಹಾರ
ಕಬ್ಬಿಣಾಂಶ ಹೆಚ್ಚಿಸಲು ಹಸಿರು ತರಕಾರಿಗಳು, ಸೀಮೆಬದನೆ, ದ್ವಿದಳ ಧಾನ್ಯಗಳು, ಬ್ರೊಕೊಲಿ, ಮೀನು ಹಾಗೂ ಮಾಂಸಾಹಾರ (ಅನುಸರಿಸುವವರು) ಸೇವಿಸಬಹುದು. ಸಮತೋಲನ ಆಹಾರ ಮತ್ತು ಸರಿಯಾದ ಚಿಕಿತ್ಸೆಯಿಂದ ರಕ್ತಹೀನತೆಯನ್ನು ನಿಯಂತ್ರಿಸಬಹುದು.
ನಿದ್ರೆ ಮಾತ್ರ ಸಾಕಾಗುವುದಿಲ್ಲ, ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಕೂಡ ಸಮರ್ಪಕವಾಗಿರಬೇಕು ಎಂಬುದನ್ನು ಮರೆಯಬೇಡಿ.



