ಹೊಸದಿಗಂತ ವರದಿ ತುಮಕೂರು:
ಜನ್ಮಜಾತ ಹೃದಯರೋಗ ಸಮಸ್ಯೆ(TAPVC) ಹಾಗೂ ಟ್ರಂಕಸ್ ರೋಗಕ್ಕೆ ತುತ್ತಾಗಿದ್ದ ಇಬ್ಬರು ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಸಿದ್ದಾರ್ಥ ಅಡ್ವಾನ್ಸಡ್ ಹಾರ್ಟ್ ಸೆಂಟರ್ ವೈದ್ಯರ ತಂಡ ಇಬ್ಬರ ಮಕ್ಕಳ ಪ್ರಾಣ ಉಳಿಸಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು ಹೈದರಾಬಾದಿನ ಮೂರು ತಿಂಗಳಿನ ಹಸುಗೂಸು ಮತ್ತು ತುಮಕೂರು ಗ್ರಾಮಾಂತರದ ಒಂದು ಮಗುವಿಗೆ ಈ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗಿದೆ. ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡಕ್ಕೆ ಡಾ.ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳ ಹೃದಯಶಸ್ತ್ರ ಚಿಕಿತ್ಸೆಯ ಸಲುವಾಗಿ ಸಿದ್ದಾರ್ಥ ಆಡ್ವಾನ್ಸ್ಡ್ ಹಾರ್ಟ್ ಸೆಂಟರ್ ನಲ್ಲಿ ಛಾಯಾ ಎಂಬ ಪ್ರತ್ಯೇಕ ವಿಭಾಗ ವನ್ನು ಅರಂಭಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೃದ್ರೋಗ ತಜ್ಞ ಡಾ.ತಮೀಮ್ ಅಹ್ಮದ್ .ಹಾರ್ಟ್ ಸೆಂಟರ್ ಸಿಇಒ ಮತ್ತು ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್ ಹಾಜರಿದ್ದರು.