ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಆರಂಭವಾಗಲಿದೆ. ಬಹುತೇಕ ಕಡೆಗಳಲ್ಲಿ ಇನ್ನೆರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲೆವೆಡೆ ಮುಂದಿನ 2 ದಿನ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಚಾಮಾರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರದಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು ಸೇರಿದಂತೆ ಹಲವು ಭಾಗದಲ್ಲಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಳೆದ ವಾರ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡ ಮೋಚಾ ಸೈಕ್ಲೋನ್ನಿಂದ ಕರ್ನಾಟಕದಲ್ಲಿ ಈಗಾಗಲೇ ಹಲವು ಭಾಗದಲ್ಲಿ ಮಳೆಯಾಗಿದೆ.
ಬಂಗಾಳ ಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ಮೋಚಾ ಚಂಡಮಾರುತ ರೂಪಗೊಂಡಿತ್ತು. ಬಳಿಕ ಉತ್ತರದ ಕಡೆಗೆ ಚಲಿಸಿತ್ತು. ಇತ್ತ ಮೋಚಾ ಚಂಡಮಾರುತ ಬಾಂಗ್ಲಾದೇಶ ಕರಾವಳಿ ಭಾಗ ತಲುಪುವಷ್ಟರಲ್ಲಿ ಕ್ಷೀಣಿಸಿತ್ತು. ಮೋಚಾ ಚಂಡಮಾರುತದಿಂದ ಈ ಬಾರಿ ಭಾರತದಲ್ಲಿ ಮುಂಗಾರು ಆರಂಭಕ್ಕೆ ಉತ್ತಮ ವಾತಾವರಣ ನಿರ್ಮಿಸಿದೆ. ಹೀಗಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸಲಿದೆ. ಕೇರಳ ಪ್ರವೇಶಿಸಿದ ಮೂರರಿಂದ ನಾಲ್ಕು ದಿನದಲ್ಲಿ ಮುಂಗಾರು ಕರ್ನಾಟಕ ಪ್ರವೇಶಿಸಲಿದೆ.
ಮುಂಗಾರು ಅವಧಿಯಲ್ಲಿ ಶೇಕಡಾ 90 ರಷ್ಟು ಮಳೆಯಾಗವು ಸಾಧ್ಯತೆ ಇದೆ. ಸರಾಸರಿಯಾಗಿ ಕರ್ನಾಟಕದಲ್ಲಿ ಶೇ 70 ರಿಂದ 80 ರಷ್ಟು ಮಳೆ ಮುಂಗಾರಿನ ಅವಧಿಯಲ್ಲಿ ಆಗಲಿದೆ. ಇನ್ನುಳಿದ 20 ರಿಂದ 30 ಶೇಕಡಾ ಮಳೆ ಹಿಂಗಾರು ಅವಧಿಯಲ್ಲಿ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.