ಹೊಸದಿಗಂತ ವರದಿ,ಕಲಬುರಗಿ:
ಕಳೆದ ಎರಡು ತಿಂಗಳಿಂದ ಬಿಸಿಲಿಗೆ ಕಾದು ಕೆಂಡದಂತೆ ಆಗಿದ್ದ ಕಲಬುರಗಿ ನಗರ ಸೇರಿ ಜಿಲ್ಲಾದ್ಯಂತ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗುವ ಮೂಲಕ ಭೂಮಿಗೆ ತಂಪೆರೆಯುವ ಕೆಲಸ ಮಾಡಿದೆ.
ಮಧ್ಯಾಹ್ನ 1ಕ್ಕೆ ಶುರುವಾರ ಮಳೆ ಸುಮಾರು 40 ನಿಮಿಷಗಳ ಕಾಲ ಸುರಿಯಿತು. ನಗರದಲ್ಲಿ ಅಲ್ಲಲ್ಲಿ ಮಳೆ ನೀರು ರಸ್ತೆಗೆ ಬಂದು ವಾಹನ ಸವಾರರು ಪರದಾಡುವಂತಾಯಿತು. ಬೇಸಿಗೆ ಮೊದಲ ಉತ್ತಮ ಮಳೆ ಪಾಲಿಕೆಯ ಹುಳುಕನ್ನು ಹೊರಹಾಕಿತು ಎಂದರೆ ತಪ್ಪಿಲ್ಲ.
ರಸ್ತೆಗೆ ಹರಿದ ನಾಲೆ ನೀರು
ಮಧ್ಯಾಹ್ನ ಸುರಿದ ಮಳೆಗೆ ರಸ್ತೆ ಮೇಲೆ ಚರಂಡಿ ನೀರು ಹರಿಯುವುದು ನಗರದ ಎಲ್ಲೆಡೆ ಕಂಡು ಬಂದಿತು, ಮುಖ್ಯವಾಗಿ ಕೋರ್ಟ್ ಎದುರು, ಯುನೈಟೆಡ್ ಆಸ್ಪತ್ರೆ, ಲಾಳಗೇರಿ ಕ್ರಾಸ್ನಿಂದ ಅಪ್ಪ ಗಾರ್ಡ್ನ ವರೆಗೆ, ಜಗತ್ ವೃತ್ತಘಿ, ಗೋಲ್ಡ್ ಹಬ್ ಎದುರು ಸೇರಿ ನಾನಾ ಕಡೆಗಳಲ್ಲಿ ಚರಂರಿ ನೀರು ರಸ್ತೆ ಮೇಲೆಯೆ ಹರಿದವು.
ಸಿಡಿಲು ಬಡಿದು ಬಾಲಕ ಸಾವು
ಕಲಬುರಗಿ ನಗರ ಹಾಗೂ ಜಿಲ್ಲೆಯಾದ್ಯಂತ ಶನಿವಾರ ಮಧ್ಯಾಹ್ನ ವರುಣನ ಆರ್ಭಟ ಜೋರಾಗಿದ್ದು, ಜಿಲ್ಲೆಯ ಆಳಂದ ತಾಲೂಕಿನ ನರೋಣಾ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಮೀನಿನಿಂದ ಎತ್ತಿನ ಬಂಡಿಯಲ್ಲಿ ಮನೆಗೆ ವಾಪಾಸು ತೆರಳುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಮಹೇಶ್ (10) ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.