June 17, 2026
Wednesday, June 17, 2026
spot_img

ಗುಮ್ಮಟ ನಗರಿ ವಿಜಯಪುರದಲ್ಲಿ ಭಾರೀ ಮಳೆ: ಧರೆಗಿಳಿದ ವರುಣ, ರೈತರ ಮೊಗದಲ್ಲಿ ನಗು!

ಹೊಸದಿಗಂತ ವಿಜಯಪುರ:

ಬಿರು ಬಿಸಿಲಿನಿಂದ ತತ್ತರಿಸಿದ್ದ ವಿಜಯಪುರ ನಗರಕ್ಕೆ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆ ತಂಪೆರೆದಿದೆ. ಬೆಳಗ್ಗಿನಿಂದಲೇ ತೀವ್ರ ಶಾಖದಿಂದ ಕೂಡಿದ್ದ ವಾತಾವರಣವು, ಸಂಜೆಯಾಗುತ್ತಿದ್ದಂತೆ ದಿಢೀರ್ ಬದಲಾಗಿ ಮೋಡಕವಿದಂತಾಯಿತು. ನಂತರ ಕೆಲಕಾಲ ಅಬ್ಬರದ ಮಳೆ ಸುರಿಯಿತು.

ಸ್ತಬ್ಧಗೊಂಡ ರಸ್ತೆ ಸಂಚಾರ, ಜನಜೀವನ ಅಸ್ತವ್ಯಸ್ತ

ಅನಿರೀಕ್ಷಿತವಾಗಿ ಸುರಿದ ಭಾರಿ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳೆಲ್ಲವೂ ಜಲಾವೃತಗೊಂಡವು. ಮಳೆ ನೀರು ಹರಿದು ಹೋಗಲು ಜಾಗವಿಲ್ಲದೆ ರಸ್ತೆಗಳಲ್ಲೇ ಮಡುಗಟ್ಟಿ ನಿಂತಿದ್ದರಿಂದ ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸಬೇಕಾಯಿತು. ಏಕಾಏಕಿ ಸುರಿದ ವರ್ಷಧಾರೆಗೆ ಸಾರ್ವಜನಿಕರ ದೈನಂದಿನ ಜೀವನವು ಕೆಲಕಾಲ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ರೈತರ ಮೊಗದಲ್ಲಿ ಮಂದಹಾಸ

ಕಳೆದ ಕೆಲವು ದಿನಗಳಿಂದ ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ವಿಜಯಪುರ ಜಿಲ್ಲೆಯ ಅನ್ನದಾತರಿಗೆ ಈ ಮಳೆ ಹೊಸ ಭರವಸೆ ನೀಡಿದೆ. ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿರುವ ರೈತರಿಗೆ ವರುಣ ದೇವ ತಂಪೆರೆದಿದ್ದು, ಕೃಷಿ ಚಟುವಟಿಕೆಗಳು ಇನ್ನು ಚುರುಕುಗೊಳ್ಳಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !