ಹೊಸದಿಗಂತ ವರದಿ ಮಡಿಕೇರಿ:
ಸೋಮವಾರ ಸಂಜೆಯಿಂದ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಮತ್ತೆ ತುಂಬಿ ಹರಿಯುತ್ತಿವೆ.
ಜಿಲ್ಲೆಯ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯದ ಒಳ ಹರಿವಿನ ಪ್ರಮಾಣವೂ ಹೆಚ್ಚಳಗೊಂಡಿದೆ.
ದಕ್ಷಿಣ ಕೊಡಗಿನ ಟಿ ಶೆಟ್ಟಿಗೇರಿ, ಬಿರುನಾಣಿ, ತೆರಾಲು, ಹುದಿಕೇರಿ, ಶ್ರೀಮಂಗಲ ವ್ಯಾಪ್ತಿಯಲ್ಲೂ ಅಧಿಕ ಮಳೆ ಸುರಿಯುತ್ತಿದ್ದು, ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಭಾನುವಾರವಷ್ಟೇ ರಾಜ್ಯದ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಕೊಡಗಿಗೆ ಆಗಮಿಸಿ ಕೊಡಗಿನ ಮಳೆ ಹಾಗೂ ಬೆಳೆ ದೇವರೆಂದೇ ಪ್ರತೀತಿ ಇರುವ ಪಾಡಿ ಶ್ರೀ ಇಗ್ಗುತ್ತಪ್ಪನ ಸನ್ನಿಧಿಯಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಕಾಕತಾಳೀಯ ಎಂಬಂತೆ ಅಂದು ಸಂಜೆಯಿಂದಲೇ ಕೊಡಗಿನಲ್ಲಿ ಮುಂಗಾರು ಮತ್ತೆ ಚುರುಕುಗೊಂಡು ಸೋಮವಾರದಿಂದ ಉತ್ತಮ ಮಳೆಯಾಗತೊಡಗಿದೆ.
ಮತ್ತೊಂದೆಡೆ ಮಳೆಗಾಗಿ ಸರ್ಕಾರ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಿದೆ ಎಂಬ ಶಂಕೆಯೂ ಜನರಲ್ಲಿ ಮೂಡಿದೆ. ಆದರೆ ರಾಜ್ಯದ ಜಲಸಂಪನ್ಮೂಲ ಸಚಿವರಾಗಿರುವ ಚೆಲುವರಾಯಸ್ವಾಮಿ ಅವರು ಇದನ್ನು ಅಲ್ಲಗಳೆದಿದ್ದಾರೆ.
ಇದನ್ನೂ ಓದಿ:
ಕೊಡಗಿನಲ್ಲಿ ಮೋಡ ಬಿತ್ತನೆ ಕಾರ್ಯ ಇನ್ನೂ ಆರಂಭಿಸಿಲ್ಲ. ಉತ್ತಮ ಮಳೆಯಾಗದಿದ್ದಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಮೋಡ ಬಿತ್ತನೆ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಸೋಮವಾರ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದರು.
ಪ್ರಸಕ್ತ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಎಲ್ಲೆಡೆ ಮೋಡ ಕವಿದ ವಾತಾವರಣ ಹಾಗೂ ಧಾರಾಕಾರ ಮಳೆಯಾಗುತ್ತಿದೆ.



