ಹೊಸದಿಗಂತ ವರದಿ ವಿಜಯಪುರ:
ಅತಿವೃಷ್ಟಿ ಮತ್ತು ಪ್ರವಾಹ ಪರಿಶೀಲನೆಗಾಗಿ ಕೇಂದ್ರ ಅಧ್ಯಯನ ತಂಡ ಗುರುವಾರ ಜಿಲ್ಲೆಗೆ ಆಗಮಿಸಿದ್ದು, ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಮ ಸೇರಿದಂತೆ ವಿವಿಧೆಡೆ ಸಂಚರಿಸಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.
ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ನಿರ್ದೇಶಕ ಡಾ. ಕೆ. ಮನೋಹರನ್, ಗ್ರಾಮೀಣಾಭಿವೃದ್ಧಿ ಸಚಿವಾಲಯ ಅಧೀನ ಕಾರ್ಯದರ್ಶಿ ಎಸ್.ಬಿ. ತಿವಾರಿ ಸಾತಿಹಾಳ ಬ್ರಿಜ್ ಹಾಗೂ ರಸ್ತೆಯ ಪಕ್ಕದಲ್ಲಿನ ಜಮೀನುಗಳನ್ನು ಪರಿಶೀಲಿಸಿ ಹಾನಿಯ ಕುರಿತು ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭ ರೈತರು ತಮ್ಮ ಸಮಸ್ಯೆಯನ್ನು ಕೇಂದ್ರ ತಂಡದ ಮುಂದೆ ಹೇಳಿಕೊಂಡರು.
ಈ ಸಂದರ್ಭ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ಜಂಟಿ ನಿರ್ದೇಶಕ ಪ್ರಕಾಶ ಚವ್ಹಾಣ, ತೋಟಗಾರಿಕೆ ಇಲಾಖೆಯ ಬರಗಿಮಠ ಇದ್ದರು.