ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಕೇರಳದಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಎದುರಿಸಲು ಅಲರ್ಟ್ ಇರುವಂತೆ ಡಿಜಿಪಿ ಅನಿಲ್ ಕಾಂತ್, ಪೋಲೀಸರಿಗೆ ಖಡಕ್ ಸೂಚನೆ ನೀಡಿದ್ದಾರೆ.ಸಂಭಾವ್ಯ ಪರಿಸ್ಥಿತಿ ಎದುರಿಸಲು ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಚನೆ ರವಾನಿಸಲಾಗಿದೆ. ಅಲ್ಲದೆ ತುರ್ತು ಪರಿಸ್ಥಿತಿ ನಿಭಾಯಿಸಲು ಪ್ರತಿ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಯನ್ನು ಪ್ರಾರಂಭಿಸಲು ಕೂಡಾ ಸೂಚಿಸಲಾಗಿದೆ.
ಸಶಸ್ತ್ರ ಪೋಲೀಸ್ ಬೆಟಾಲಿಯನ್ ವಿಭಾಗದ ಎಡಿಜಿಪಿ ಎಂ.ಆರ್.ಅಜಿತಕುಮಾರ್ ಅವರನ್ನು ಪೋಲೀಸ್ ನಿಯೋಜನೆಯ ನೋಡಲ್ ಅಧಿಕಾರಿಯಾಗಿ ಮತ್ತು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ವಿಜಯ್ ಎಸ್.ಸಾಕರೆ ಅವರನ್ನು ವಿಪತ್ತು ನಿರ್ವಹಣೆ ಕಾರ್ಯಾಚರಣೆಯ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಎಲ್ಲಾ ಪೋಲೀಸ್ ಠಾಣೆಗಳಲ್ಲಿ ಜೆಸಿಬಿ, ಬೋಟ್ಗಳು ಮತ್ತು ಇತರ ಜೀವ ರಕ್ಷಕ ಸಾಧನಗಳನ್ನು ಸಿದ್ಧಪಡಿಸಬೇಕು. ಕರಾವಳಿ ಪ್ರದೇಶಗಳಲ್ಲಿ ಭದ್ರತಾ ದೋಣಿಗಳು ಸೇರಿದಂತೆ ವ್ಯವಸ್ಥೆಯನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಕರಾವಳಿ ಪೋಲೀಸ್ ಠಾಣೆಗಳಿಗೆ ಸೂಚಿಸಲಾಗಿದೆ.