ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ತಂಪೆರದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಮಳೆಯೇ ಆಗಿಲ್ಲ. ಬಿಸಿಲ ಝಳಕ್ಕೆ ತುತ್ತಾಗಿದ್ದ ಉತ್ತರ ಕರ್ನಾಟಕ, ಮಲೆನಾಡು ಸೇರಿ ರಾಜ್ಯದ 12 ಜಿಲ್ಲೆಗಳಲ್ಲಿ ನಿನ್ನೆ ಶುಕ್ರವಾರ ಮಳೆ ಸುರಿದಿದೆ.
ಇತ್ತ ವಿಜಯಪುರದಲ್ಲಿ ಭೀಕರ ಮಳೆಯಾಗಿದ್ದು, ಸಿಡಿಲಿಗೆ ಮಹಿಳೆ ಬಲಿಯಾಗಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಸಿಡಿಲಿಗೆ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಭೀಕರ ಸಿಡಿಲಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಬೆಳಗಾವಿ, ವಿಜಯಪುರ, ಕೊಡಗು, ಚಿಕ್ಕಮಗಳೂರು, ಬಾಗಲಕೋಟೆ, ದಕ್ಷಿಣ ಕನ್ನಡ, ಶಿವಮೊಗ್ಗ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಕಳೆದ ಕೆಲವು ದಿನಗಳಿಂದ ಬಸವಳಿದಿದ್ದ ಜನ, ಜಾನುವಾರುಗಳಿಗೆ ಕೊಂಚ ನೆಮ್ಮದಿ ಸಿಕ್ಕಿದೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದರೂ ಸಿಡಿಲು, ಮಿಂಚಿನ ಅಬ್ಬರ ತುಸು ಜೋರಾಗಿಯೇ ಇತ್ತು. ಬುಧವಾರ ರಾತ್ರಿ ಮತ್ತು ಗುರುವಾರ ಜಿಲ್ಲೆಯಲ್ಲಿ ಬಾಲಕ ಸೇರಿ ಮೂವರು ಸಿಡಿಲಿಗೆ ಬಲಿಯಾಗಿದ್ದರು.ನಿನ್ನೆ ಶುಕ್ರವಾರ ಇಂಡಿ ತಾಲೂಕಿನ ತಾಂಬಾದಲ್ಲಿ ದೇವರಿಗೆ ನೈವೇದ್ಯ ತೆಗೆದುಕೊಂಡು ಹೋಗುವಾಗ ಸಿಡಿಲು ಬಡಿದು ಭಾರತಿ ಹನುಮಂತ ಕೆಂಗನಾಳ ಎನ್ನುವವರು ಮೃತಪಟ್ಟಿದ್ದಾರೆ.