ಹೊಸ ದಿಗಂತ ವರದಿ, ಚಿತ್ರದುರ್ಗ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಡಗೆವಾರ್ ಪಾಠ ಉಳಿಸಿಕೊಳ್ಳುವ ಹೇಳಿಕೆ ಸರಿಯಲ್ಲ. ಪಠ್ಯದಲ್ಲಿ ಹೆಡಗೆವಾರ್ ಪಾಠ ಸೇರಿಸುವ ಬಗ್ಗೆ ನಮ್ಮ ವಿರೋಧವಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಹೊಸದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹೆಡಗೆವಾರ್ ಯಾರು, ಸ್ವತಂತ್ರ ಹೋರಾಟಗಾರರಾ? ಹುತಾತ್ಮರಾ? ಹೆಡಗೆವಾರ್ ಭಾಷಣ ಮಕ್ಕಳಿಗೇಕೆ ಬೇಕು. ಹೆಡ್ಗೆವಾರ್ ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಅವರ ಪಾಠವನ್ನು ಪಠ್ಯದಲ್ಲಿ ಸೇರಿಸುವುದು ಸರಿಯಾದ ಕ್ರಮವಲ್ಲ ಎಂದರು.
ಬಸವ , ಬುದ್ಧ, ಅಂಬೇಡ್ಕರ್, ಗಾಂಧಿ, ನೆಹರು, ಪಟೇಲ್ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಹೆಡಗೆವಾರ್ ಇವರೇನು ಮಾಡಿದ್ದಾರೆ. ಆರ್ಎಸ್ಎಸ್ ಸಂಸ್ಥಾಪಕರು ಎಂಬ ಕಾರಣಕ್ಕೆ ಪಠ್ಯ ಆಗಬೇಕೆ. ಕುವೆಂಪು ರಚಿತ ನಾಡಗೀತೆಯನ್ನು ತಿರುಚುವುದು. ಭಗತ್ ಸಿಂಗ್, ನಾರಾಯಣ ಗುರು ಪಾಠ ತೆಗೆಯುವುದು ಮಾಡಲಾಗುತ್ತಿದೆ. ಇಂತಹ ಕೆಲಸಗಳಿಂದ ನೀವು ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಓರ್ವ ಹುಚ್ಚ ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮಂತ್ರಿ ಸ್ಥಾನ ಕಳೆದುಕೊಂಡು ಈಶ್ವರಪ್ಪ ಈಗ ಏನಾಗಿದ್ದಾನೆ? ಈಶ್ವರಪ್ಪ ಲಂಚ ಹೊಡೆದು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ. ಇಂಥವರಿಂದ ನಾನು ಪಾಠ ಕಲಿಯಬೇಕಾ ಎಂದರು.