ಸಿನಿಮಾ ಚಿತ್ರೀಕರಣಕ್ಕೆ ಬಂದ ಕೆಲಸಗಾರರ ಮೇಲೆ ಹೆಜ್ಜೇನು ದಾಳಿ

ಹೊಸದಿಗಂತ ವರದಿ,ಅಂಕೋಲಾ:

ತಾಲೂಕಿನಲ್ಲಿ ಚಲನಚಿತ್ರವೊಂದರ ಚಿತ್ರೀಕರಣಕ್ಕೆಂದು ಆಗಮಿಸಿದ ಕೆಲಸಗಾರರ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಇಬ್ಬರು ತೀವ್ರ ಅಸ್ವಸ್ಥಗೊಂಡ ಘಟನೆ ಜಮಗೋಡ ರೈಲ್ವೆ ಸ್ಟೇಷನ್ ಕ್ರಾಸ್ ಬಳಿ ನಡೆದಿದೆ.
ಚಿತ್ರೀಕರಣ ತಂಡದಲ್ಲಿ ಲೈಟಿಂಗ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಮಂಡ್ಯ ಮೂಲದ ರಮೇಶ ಮತ್ತು ರಾಮು ಎನ್ನುವವರು ಜೇನು ನೊಣಗಳಿಂದ ದಾಳಿಗೀಡಾಗಿದ್ದು ತೀವ್ರ ಅಸ್ವಸ್ಥಗೊಂಡು ರಸ್ತೆಯಲ್ಲಿ ಕುಸಿದು ಬಿದ್ದಿದ್ದರು.
ಇವರ ಕೈಕಾಲು, ತಲೆ ಸೇರಿದಂತೆ ಅಂಗಾಂಗಗಳ ಮೇಲೆ ಜೇನು ನೊಣಗಳು ತೀವ್ರವಾಗಿ ದಾಳಿ ನಡೆಸಿ ಇಬ್ಬರೂ ಹೆಣಗಾಡುವ ಪರಿಸ್ಥಿತಿಯಲ್ಲಿದ್ದರು.
ಜೇನು ನೊಣಗಳು ತೀವ್ರವಾಗಿ ಹಾರಾಡುತ್ತಿರುವುದರಿಂದ ಯಾರೂ ಸಹಾಯಕ್ಕೆ ದಾವಿಸಲೂ ಸಾಧ್ಯವಾಗದ ಸಮಯದಲ್ಲಿ ಅದೇ ಮಾರ್ಗವಾಗಿ ಸಾಗುತ್ತಿದ್ದ ಲಕ್ಷ್ಮೇಶ್ವರದ ಆಟೋ ರಿಕ್ಷಾ ಚಾಲಕ ಮಹೇಶ ನಾಯ್ಕ ಎನ್ನುವವರು ಚಿನ್ನದಗರಿ ಯುವಕ ಸಂಘಕ್ಕೆ ಮತ್ತು 112 ಸಿಬ್ಬಂದಿಗೆ ಕರೆ ಮಾಡಿ ಸಮಯ ಪ್ರಜ್ಞೆ ತೋರಿದ್ದಾರೆ.

ಸ್ಥಳೀಯರು ಆಂಬ್ಯುಲೆನ್ಸ್ ಗೆ ಕರೆ ಮಾಡಿದರೂ ಯಾವುದೇ ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದ ಕಾರಣ ಗೋಕರ್ಣದಿಂದ ಅಂಕೋಲಾ ಕಡೆ ರೋಗಿಯನ್ನು ಸಾಗಿಸುತ್ತಿದ್ದ ಖಾಸಗಿ ಆಂಬ್ಯುಲೆನ್ಸ್ ಚಾಲಕ ಗಣೇಶ ನಾಯಕ ಎನ್ನುವವರು ರೋಗಿಯ ಕುಟುಂಬಕ್ಕೆ ಮನವರಿಕೆ ಮಾಡಿ ಓರ್ವನನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.

ಇನ್ನೋರ್ವ ಅಸ್ವಸ್ಥನನ್ನು ಮಹೇಶ ನಾಯ್ಕ ಅವರು ಚಿನ್ನದಗರಿ ಯುವಕ ಸಂಘದ ಸಹಾಯದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
ಸಾಮಾಜಿಕ ಕಾರ್ಯಕರ್ತ ಅನೀಲ ಮಹಾಲೆ ಅನೀಲ ಮಹಾಲೆ ಮತ್ತು ಸ್ಥಳೀಯರು, 112 ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸಹಕರಿಸಿದರು.
ಸಮಯೋಚಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಜೇನು ಕಡಿತಕ್ಕೊಳಗಾದವರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.
ತಾಲೂಕಿನಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಕನ್ನಡ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದ್ದು ಚಿತ್ರೀಕರಣ ತಂಡದ ಪ್ರಮುಖರಿಗೆ ಈ ಕುರಿತು ಸತೀಶ ಬೊಮ್ಮಿಗುಡಿ ಅವರು
ಮಾಹಿತಿ ನೀಡಿ ಕಾರ್ಮಿಕರ ಆರೋಗ್ಯದ ಕಾಳಜಿ ವಹಿಸುವಂತೆ ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!