ಆ ದಂಪತಿ ಈಗಿನ್ನ ತಮ್ಮ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ರು. ಮಗಳಿಗೆ ಶಾಲೆಗೆ ಸೇರಿಸಬೇಕಿತ್ತು. ಅವಳಿಗೂ ಶಾಲೆಗೆ ಶಿಕ್ಷಕಿಯಾಗಿ ಕೆಲಸ ಹುಡುಕಬೇಕಿತ್ತು. ಮನೆ ಹತ್ತಿರದ ಶಾಲೆಗೆ ಮಗಳನ್ನು ಸೇರಿಸಿ ಬಂದಿದ್ಲು. ನಿಮ್ಮಲ್ಲಿ ವೇಕೆನ್ಸಿ ಇದ್ದಾಗ ಹೇಳಿ ನಾನು ಟೀಚರ್ ಕೆಲಸ ಹುಡುಕುತ್ತಿದ್ದೇನೆ ಎಂದಿದ್ದಳು.
ಸ್ವಲ್ಪ ದಿನದ ನಂತರ ಅಲ್ಲಿ ವೇಕೆನ್ಸಿ ಇರುವುದು ಗೊತ್ತಾಗಿ ಕೆಲಸಕ್ಕೆ ಸೇರಿದ್ದಳು. ಅವಳ ಪತಿಗೆ ಈಕೆ ಕೆಲಸ ಮಾಡೋದು ಅಷ್ಟೇನೂ ಇಷ್ಟ ಇರಲಿಲ್ಲ. ಅವನಂತೂ ತುಂಬಾ ಬ್ಯುಸಿ, ಅವಳೂ ಬ್ಯುಸಿಯಾದ್ರೆ ಮನೆ ನಡೆಸೋರು ಯಾರು ಅನ್ನೋದು ಈತನ ವಾದ.
ಮಗಳು ಅಮ್ಮ ಒಟ್ಟಿಗೇ ಶಾಲೆಗೆ ಹೋಗಿ ಒಟ್ಟಿಗೇ ಬರುತ್ತಿದ್ದರು. ಒಂದು ದಿನ ಮಗಳ ಕ್ಲಾಸ್ ಟೀಚರ್ ಶಾಲೆಯಲ್ಲಿ ಬಿದ್ದು ಕಾಲು ಮುರಿದುಕೊಂಡ್ರು. ಆಗ ಹೊಸತಾಗಿ ಸೇರಿದ ಈಕೆಗೆ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಕೊಟ್ಟು ಮನೆಗೆ ತೆಗೆದುಕೊಂಡು ಹೋದ್ರೂ ಪರವಾಗಿಲ್ಲ. ನಾಳೆಗೆ ಕರೆಕ್ಷನ್ ಮುಗಿಸಿ ತನ್ನಿ, ನಾಡಿದ್ದು ಪೇರೆಂಟ್ಸ್ ಮೀಟ್ ಇದೆ ಎಂದು ಪ್ರಿನ್ಸಿಪಾಲ್ ಹೇಳಿದ್ರು.
ತನ್ನ ಕೆಲಸದ ಜೊತೆ ಬೇರೆ ಅವರ ಕೆಲಸ ಮಾಡೋಕೆ ಕಿರಿಕಿರಿ ಆದರೂ ಅನಿವಾರ್ಯ ಅಂತ ಪೇಪರ್ ವ್ಯಾಲ್ಯುಯೇಷನ್ ಮಾಡುತ್ತಿದ್ದಳು. ರಾತ್ರಿ 11 ಆದರೂ ಕೆಲಸ ಮುಗಿಯಲಿಲ್ಲ. ಕನ್ನಡ ಪತ್ರಿಕೆ ಅದಾಗಿತ್ತು. ನಿಮಗೆ ದೇವರು ಒಂದು ವರ ಕೊಟ್ಟರೆ ಏನು ಕೇಳ್ತೀರಾ ಅನ್ನೋದು ಪ್ರಬಂಧದ ಪ್ರಶ್ನೆಯಾಗಿತ್ತು. ಕೆಲ ಮಕ್ಕಳು ಈಗಲೇ ನನ್ನನ್ನು ಡಾಕ್ಟರ್ ಮಾಡು, ಸೈಂಟಿಸ್ಟ್ ಮಾಡು ಅಂತೆಲ್ಲಾ ಬರೆದಿದ್ರು. ಒಂದು ಪತ್ರಿಕೆಯಲ್ಲಿ ಮಾತ್ರ ನನ್ನನ್ನು ಮೊಬೈಲ್ ಅಥವಾ ಟಿವಿ ಮಾಡು ಎಂದು ಬರೆದಿತ್ತು.
ನನ್ನಪ್ಪ ಅಮ್ಮ, ನನಗಿಂತ ಹೆಚ್ಚು ಸಮಯ ಮೊಬೈಲ್ ಹಾಗೂ ಟಿವಿಗೆ ಕೊಡ್ತಾರೆ. ನಾನು ಅವರ ಅಟ್ರಾಕ್ಷನ್ ಆಗಬೇಕು, ಅವರು ನನ್ನನ್ನು ಬಿಟ್ಟಿರೋಕೆ ಸಾಧ್ಯವೇ ಆಗಬಾರದು ಎಂದು ಬರೆದಿತ್ತು. ಈ ಮಗುವಿನ ರೋದನೆ ನೋಡಿ ಆಕೆಗೆ ಕಣ್ಣೀರೇ ನಿಲ್ಲಲಿಲ್ಲ. ಪತಿ ಬಂದು ಯಾಕಿಷ್ಟು ಬೇಜಾರಾಗಿದ್ಯ ಎಂದ. ಪತಿಗೆ ಉತ್ತರ ಪತ್ರಿಕೆ ನೀಡಿದಳು. ಪಾಪಾ ಅಲ್ವಾ ಈ ಮಗು ಎಂದ. ಅದಕ್ಕೆ ಅವಳು ಹೇಳಿದಳು, ರೀ ಇದು ನಮ್ಮ ಮಗಳ ಉತ್ತರಪತ್ರಿಕೆ!
ಎಲ್ಲರಿಗೂ ತಮ್ಮ ಖಾಸಗಿ ಬದುಕು ಮುಖ್ಯ. ಆದರೆ ತಂದೆ-ತಾಯಿ ಹೇಗಿರುತ್ತಾರೋ ಮಕ್ಕಳೂ ಹಾಗೇ ಇರುತ್ತಾರೆ. ಅವರ ಬಾಲ್ಯ ಆರೋಗ್ಯಕರವಾಗಿರುವುದು ತುಂಬಾನೇ ಮುಖ್ಯ. ಬಾಲ್ಯದ ನೆನಪುಗಳು ಎಂದಿಗೂ ಮಾಸುವುದಿಲ್ಲ. ಮಕ್ಕಳ ಬಾಲ್ಯ ಚೆನ್ನಾಗಿರಲಿ. ಟೆಕ್ನಾಲಜಿ ಜೊತೆ ಕಳೆಯುವ ಸಮಯದಲ್ಲಿ ಅರ್ಧ ಮಕ್ಕಳ ಜೊತೆ ಕಳೆಯಿರಿ.