ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ಹೀರೋಗಳಲ್ಲಿ ಮೋಸ್ಟ್ ಎಲಿಜಬಲ್ ಬ್ಯಾಚುಲರ್ಗಳಲ್ಲಿ ಶರ್ವಾನಂದ್ ಒಬ್ಬರು. ಕ್ಯಾರೆಕ್ಟರ್ ಆರ್ಟಿಸ್ಟ್, ಸೈಡ್ ಹೀರೋ ಆಗಿ ವೈವಿಧ್ಯಮಯ ಕಥೆಗಳಿಂದ ಮನಸೂರೆಗೊಂಡು ನಾಯಕನಾಗಿ ಬೆಳೆದಿರುವ ಶರ್ವಾನಂದ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಒಕೇ ಒಕ ಜೀವಿತಂ ಚಿತ್ರದ ಮೂಲಕ ಉತ್ತಮ ಯಶಸ್ಸನ್ನು ಪಡೆದರು. ಕಳೆದ ಕೆಲ ದಿನಗಳಿಂದ ಶರ್ವಾನಂದ್ ಮದುವೆ ಸುದ್ದಿ ಕೇಳಿ ಬರುತ್ತಿದ್ದರೂ ಶರ್ವಾ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದೀಗ ಇದ್ದಕ್ಕಿದ್ದಂತೆ ಜನವರಿ 26ರ ಗಣರಾಜ್ಯೋತ್ಸವದಂದು ಶರ್ವಾನಂದ್ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಶರ್ವಾನಂದ್ ಹೈದರಾಬಾದ್ನ ಖಾಸಗಿ ಹೋಟೆಲ್ನಲ್ಲಿ ಕೇವಲ ಕುಟುಂಬ ಸದಸ್ಯರು, ಆತ್ಮೀಯ ಅತಿಥಿಗಳು ಮತ್ತು ಶರ್ವಾ ಆಪ್ತರೊಂದಿಗೆ ಸೇರಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರಕ್ಷಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ರಕ್ಷಿತಾ ಸದ್ಯ ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಾಜಿ ರಕ್ಷಣಾ ಸಚಿವ, ಟಿಡಿಪಿ ನಾಯಕ ಸ್ವರ್ಗೀಯ ಬೊಜ್ಜಲ ಗೋಪಾಲಕೃಷ್ಣ ರೆಡ್ಡಿ ಅವರ ಮೊಮ್ಮಗಳು ಮತ್ತು ಹೈಕೋರ್ಟ್ ವಕೀಲ ಮಧುಸೂಧನ ರೆಡ್ಡಿ ಅವರ ಪುತ್ರಿ. ಆದರೆ ಇವರಿಬ್ಬರದ್ದು ಪ್ರೇಮ ವಿವಾಹವೋ ಅಥವಾ ಅರೇಂಜ್ಡ್ ಮ್ಯಾರೇಜ್ ಎಂಬುದು ಇನ್ನೂ ತಿಳಿದು ಬಂದಿಲ್ಲ. ಶೀಘ್ರದಲ್ಲೇ ಇಬ್ಬರೂ ಮದುವೆಯಾಗಲಿದ್ದಾರೆ. ಈ ಸಮಾರಂಭದಲ್ಲಿ ರಾಮ್ ಚರಣ್, ಚಿರಂಜೀವಿ, ನಾಗಾರ್ಜುನ, ಅಲ್ಲರಿ ನರೇಶ್, ಸಾಯಿ ರಾಮ್ ಶಂಕರ್ ಮತ್ತು ದಿಲ್ ರಾಜು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಜೊತೆಗೆ ತರುಣ್, ವಡ್ಡೆ ನವೀನ್, ಶ್ರೀಕಾಂತ್, ರಾಣಾ, ಗೌತಮ್, ಸಿದ್ಧಾರ್ಥ್, ಆದಿತಿ ರಾವ್ ಹೈದರಿ.. ಮತ್ತು ಕೆಲವು ಗಣ್ಯರು ಭಾಗವಹಿಸಿದ್ದರು.