ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಆಳಂದ ಪಟ್ಟಣದ ಹಜರತ್ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯರ ಸಮಾಧಿಯ ಮೇಲಿನ ಶಿವಲಿಂಗಕ್ಕೆ ಶಿವರಾತ್ರಿಯ ಪವಿತ್ರ ದಿನದಂದು ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಯಿಂದ ಪೂಜೆ ಸಲ್ಲಿಸಲು ಮತ್ತೆ 13 ಜನ ಹಿಂದು ಮುಖಂಡರಿಗೆ ಅವಕಾಶ ನೀಡಿ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ ಆದೇಶಿಸಿದೆ.
ಇದಕ್ಕೂ ಮೊದಲು ಅರ್ಜಿ ಸಲ್ಲಿಸಿದ ಹಿಂದೂ ಮುಖಂಡ ಸಿದ್ದರಾಮಯ್ಯ ಹಿರೇಮಠ್ ಅವರೊಂದಿಗೆ,೨ನೇ ಅರ್ಜಿದಾರ ಗುರುಶಾಂತ್ ಟೆಂಗಳಿ ಅವರು ಸಲ್ಲಿಸಿದ ಅರ್ಜಿಯಲ್ಲಿ ಹೆಸರಿದ್ದ 14 ಜನರ ಪೈಕಿ,13 ಜನರಿಗೆ ಪೂಜೆಗೆ ಅವಕಾಶ ಕಲ್ಪಿಸಿ ಆದೇಶ ನೀಡಿದ್ದು,ಫೆ.15ರ ಮಧ್ಯಾಹ್ನ ೨ ಗಂಟೆಯಿಂದ ರಾತ್ರಿ 8 ಗಂಟೆಯ ಒಳಗಾಗಿ ಪೂಜೆ ಸಲ್ಲಿಸಬಹುದು ಎಂದು ತಿಳಿಸಿದೆ.
ನಿನ್ನೆಯಷ್ಟೇ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ಕಮಿಟಿಯೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಶಿವಲಿಂಗ ಪೂಜೆಗೆ ತಡೆ ನೀಡುವಂತೆ ಹಾಕಿದ್ದ ಅರ್ಜಿ ವಜಾ ಮಾಡಿತ್ತು.ಇದರ ಜೊತೆಗೆ ಶಿವಸೇನಾ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ ಜಿಲ್ಲಾಧಿಕಾರಿ ಗಳಿಗೆ 14 ಜನರಿಗೆ ಪೂಜೆ ಗೆ ಅವಕಾಶ ನೀಡುವಂತೆ ಮನವಿ ನೀಡಿದ್ದರು.ಜಿಲ್ಲಾಧಿಕಾರಿ ಕಚೇರಿಯಿಂದ ಯಾವುದೇ ಸೂಚನೆ ಬಾರದ ಹಿನ್ನಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠ ಈ ಕೆಳಗಿನ 13 ಜನರಿಗೆ ಪೂಜೆಗೆ ಅನುಮತಿ ನೀಡಿ ಆದೇಶಿಸಿದೆ. ಗುರುಶಾಂತ್ ಟೆಂಗಳಿ( ಅರ್ಜಿದಾರ) ಹರ್ಷಾನಂದ ಸುಭಾಷ್ ಗುತ್ತೇದಾರ್,ರಾಕೇಶ್ ರಾಜಶೇಖರ ಜಮಾದಾರ್, ಶಿವರಾಜ ಷಡಕ್ಷರಿ ಬಾಳಿ, ಅಶೋಕ್ ಶಾಂತಪ್ಪ ಬಗಲಿ,ಮಲ್ಲಿಕಾರ್ಜುನ ಶಿವಲಿಂಗಪ್ಪ ಸಾವಳಗಿ, ಶಿವಪುತ್ರ ನಡಿಗೇರಿ, ಮಲ್ಲಿಕಾರ್ಜುನ ಕಂದಗೋಳ, ವೀರಣ್ಣ ಭೀಮಪ್ಪ ಹತ್ತರಗಿ,ರಾಜು ಚೌಹಾಣ್,ಹಣಮಂತರಾವ್ ಪಾಟೀಲ್, ರವಿ ಮೌಲಪ್ಪ ಮದನಕರ್,ಮಲಕಣ್ಣಾ ಹಿರೇಪುಜಾರಿ ಸೇರಿದಂತೆ 13 ಜನರಿಗೆ ಪೂಜೆಗೆ ಅವಕಾಶ ನೀಡಿದೆ.
ದರ್ಗಾ ಕಮಿಟಿಯ ಅಪೀಲ್ ವಜಾ
ಈ ಮುಂಚೆ ಮೊದಲನೇ ಅರ್ಜಿದಾರ ಸಿದ್ರಾಮಯ್ಯ ಹಿರೇಮಠ್,ಗೆ ಶಿವಲಿಂಗ ಪೂಜೆಗೆ ಅನುಮತಿ ನೀಡಿ ಫೆ.೧೧ರಂದು ನೀಡಿದ ಹೈಕೋರ್ಟ್ ಪೀಠದ ಆದೇಶವನ್ನು ಪ್ರಶ್ನಿಸಿ ದರ್ಗಾ ಕಮಿಟಿಯೂ,ಶುಕ್ರವಾರ ಪುನಃ ಹೈಕೋರ್ಟ್ನನ ದ್ವೀಸದಸ್ಯ ಪೀಠಕ್ಕೆ ಅಪೀಲ್ ಹೋಗಿದ್ದು,ಅದನ್ನು ಸಹ ಕಲಬುರಗಿ ವಿಭಾಗೀಯ ಡಬಲ್ ಬೆಂಚ್ ತಿರಸ್ಕರಿಸಿದೆ. ನಿನ್ನೆಯಷ್ಟೆ ಪೂಜೆಗೆ ನಿರಾಕರಿಸುವಂತೆ ಸುಪ್ರೀಂಕೋರ್ಟ್ ಗೆ ದರ್ಗಾ ಕಮಿಟಿ ಸಲ್ಲಿಸಿದ ರಿಟ್ ಅರ್ಜಿಯನ್ನು ಸಹ ದೇಶದ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.



