ಹೊಸದಿಗಂತ ವರದಿ, ಬೆಳಗಾವಿ:
ಹಿಜಾಬ್ ನಿಷೇಧ ತೆರವುಗೊಳಿಸವುದಾಗಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದ ಶ್ರೀಗಳು, ಸರ್ಕಾರ ಕಾನೂನು ಮಾಡಿದರೆ ಎಲ್ಲರಿಗೂ ಅನ್ವಯ ಆಗುವಂತೆ ಇರಬೇಕು. ಆದರೆ ಒಂದು ಪಂಗಡ, ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಕಾನೂನು ಮಾಡುವುದು ಸರಿಯಲ್ಲ ಎಂದರು.
ಸರ್ಕಾರ ಮತ್ತು ಮುಖ್ಯಮಂತ್ರಿಗಳ ವರ್ತನೆ ಶೋಭೆ ತರುವಂಥದ್ದಲ್ಲ. ಸಿದ್ದರಾಮಯ್ಯ ಅವರು ಕರ್ನಾಟಕದ ಎಲ್ಲ ಸಮುದಾಯಗಳ ಮುಖ್ಯಮಂತ್ರಿ. ಒಂದು ಪಂಗಡದ ಮುಖ್ಯಮಂತ್ರಿ ಅಲ್ಲ. ಇಂತಹ ನಡವಳಿಕೆ ಒಪ್ಪುವಂತಹದಲ್ಲ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಈಚೆಗೆ ರಾಜ್ಯದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಹಿಳಾ ಪರೀಕ್ಷಾರ್ಥಿಗಳ ಮಂಗಳಸೂತ್ರ, ಕಾಲುಂಗುರ ಹಾಗೂ ಕಿವಿಯೋಲೆ ತೆಗೆದಿಡಬೇಕೆಂಬ ನಿಯಮ. ಆದರೆ, ಮತ್ತೊಂದು ಪಂಗಡದವರಿಗೆ ಹಿಜಾಬ್ ಧರಿಸಿ ಎಂದು ಹೇಳುವುದು ಎಷ್ಟು ಸರಿ ಪ್ರಶ್ನಿಸಿದ ಪೇಜಾವರಶ್ರೀಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಆಡಳಿತ ಮಾಡದಂತೆ ಸಲಹೆ ನೀಡಿದರು.