ಹೊಸದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯಲ್ಲಿ ತಡವಾಗಿ ಕಾಣಿಸಿಕೊಂಡ ಹಿಜಾಬ್ ವಿವಾದ, ಮಂಗಳವಾರ ತಾರಕಕ್ಕೇರಿದೆ. ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಸೆಕ್ಷನ್ 144 ಜಾರಿಗೊಳಿಸಿದೆ.
ಸೋಮವಾರ ವಿವಾದ ಕಾಣಿಸಿದ್ದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಹಾಗಾಗಿ ಇದು ಬಾಪೂಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕಾಣಿಸಿಕೊಂಡಿತು. ಬೆಳಿಗ್ಗೆಯೇ ಕಾಲೇಜಿಗೆ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಆಗಮಿಸಿದ್ದರು. ಇದನ್ನು ವಿರೋಧಿಸಿ ಮತ್ತೊಂದು ಬಣ ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿತು.
ಈ ವೇಳೆ ವಿದ್ಯಾರ್ಥಿಯೋರ್ವ ಕಾಲೇಜಿನ ಧ್ವಜ ಸ್ಥಂಭವನ್ನು ಏರಿ ಭಗವಾಧ್ವಜ ಹಾರಿಸಿದ. ಆಗ ಕಾಲೇಜಿಗೆ ಮೊದಲೇ ಪ್ರವೇಶ ಮಾಡಿದ್ದ ಮತ್ತೊಂದು ಬಣದ ವಿದ್ಯಾರ್ಥಿಗಳು ಹಿಜಾಬ್ ಪರ ಘೋಷಣೆ ಕೂಗಿದರು. ಜೊತೆಗೆ ಕಾಲೇಜು ಕೊಠಡಿ ಕಡೆಯಿಂದ ಕಲ್ಲು ತೂರಾಟ ನಡೆಸಿದರು. ಆಗ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಲ್ಲು ತೂರಾಟ ನಡೆಸಿದ ಗುಂಪನ್ನು ವಶಕ್ಕೆ ಪಡೆದಿದ್ದಾರೆ.