ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದ್ದು, ಇಂದು ಹೈ ಕೋರ್ಟ್ ಮಹತ್ವದ ವಿಚಾರಣೆ ಕೈಗೆತ್ತಿಕೊಂಡಿದೆ.
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಎಲ್ಲ ಭಾವನೆಗಳನ್ನು ಪಕ್ಕಕ್ಕೆ ಇರಿಸಬೇಕಿದೆ. ಸಂವಿಧಾನ ಹೇಳಿದಂತೆ ನಡೆಯುತ್ತೇವೆ. ಸಂವಿಧಾನವೇ ಭಗವದ್ಗೀತೆ ಎಂದು ಕೃಷ್ಣ ಎಸ್. ದೀಕ್ಷಿತ್ ವಿಚಾರಣೆ ವೇಳೆ ಹೇಳಿದ್ದಾರೆ.
ವಿಚಾರಣೆ ವೇಳೆ ಹಿಜಾಬ್ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್, ಮುಸ್ಲಿಂ ಸಮುದಾಯದಲ್ಲಿ ತಲೆಗೆ ಸ್ಕಾರ್ಫ್ ಧರಿಸುವುದು ಅತ್ಯಗತ್ಯ. ಪವಿತ್ರ ಕುರಾನ್ ಸೂಚಿಸಿದಂತೆ ಇದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದ್ದು, ಸಮವಸ್ತ್ರ ನಿರ್ಧರಿಸಲು ಆಯಾ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಸ್ವಾತಂತ್ರ್ಯ ನೀಡಲಾಗಿದೆ. ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆ ಎಂದು ಅಡ್ವೋಕೇಟ್ ಜನರಲ್ ಹೇಳಿದ್ದಾರೆ.
ಮದ್ರಾಸ್, ಬಾಂಬೆ ಮತ್ತು ಕೇರಳ ಕೋರ್ಟ್ಗಳ ಇಂಥ ಸಮಸ್ಯೆ ನಿಭಾಯಿಸುವುದಿಲ್ಲ. ಹಿಜಾಬ್ ಧರಿಸುವುದು ಸಂವಿಧಾನ ಆರ್ಟಿಕಲ್ 19(1)(ಎ) ಮತ್ತು ಆರ್ಟಿಕಲ್ 19(6) ಅಡಿಯಲ್ಲಿ ಬರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಿಂದ ರಕ್ಷಿಸಲ್ಪಟ್ಟಿದೆ. ಹಿಜಾಬ್ ಧರಿಸುವುದು ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಹೇಳಿದರು.
ಕೇರಳ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ವಕೀಲರು, ಜಾತ್ಯತೀತ ಭಾವನೆ ಒಂದು ಧರ್ಮಕ್ಕೆ ಯಾವುದು ಮೂಲಭೂತ ಎಂದು ಹೇಳಲು ಸಾಧ್ಯವಿಲ್ಲ. ವಯಸ್ಕಳಾದ ನಂತರ ಅಪರಿಚಿತರಿಗೆ ಮುಖ ತೋರಿಸುವಂತಿಲ್ಲ ಎಂದು ಕುರಾನ್ ಹೇಳಿದೆ. ಅದೇ ಕಾರಣದಿಂದ ಹಿಜಾಬ್ ಧರಿಸಲಾಗುವುದು ಎಂದು ಕೇರಳ ಹೈಕೋರ್ಟ್ ಹೇಳಿದೆ. ಸಿಬಿಎಸ್ಇ ಕೂಡ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಹಾಗಾಗಿ ಕರ್ನಾಟಕದ ಕಾಲೇಜುಗಳಲ್ಲಿಯೂ ಹಿಜಾಬ್ ಧರಿಸಲು ಅನುಮತಿ ನೀಡಿ ಎಂದು ಹೇಳಿದ್ದಾರೆ.
ವಾದಗಳ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದೆ.