ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಹಿಜಾಬ್ ಮತ್ತೆ ತರುವ ಮಾತನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ, ಆದರೆ ಇದು ನಿಜವಾದರೆ ಶಾಲೆಗಳಲ್ಲಿ ಕೇಸರಿ ಶಾಲು ಕಾಣಿಸೋದು ಗ್ಯಾರೆಂಟಿ ಎಂದು ಬಿಜೆಪಿ ಹೇಳಿದೆ.
ಈ ಬೆಳವಣಿಗೆಗಳನ್ನು ಗಮನಿಸಿ ಕಾಂಗ್ರೆಸ್ ಸರ್ಕಾರ ಮಾತನಾಡಿದ್ದು, ಅನಾವಶ್ಯಕ ವಿವಾದ ಸೃಷ್ಟಿಸಬೇಡಿ ಎಂದು ಹೇಳಿದೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ಮಕ್ಕಳು ಬಂದಿದ್ದೇ ಆದರೆ ಹಿಂದೂ ಮಕ್ಕಳು ಕೇಸರಿ ಶಾಲ್ ಧರಿಸಿ ಬರೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ಸವಾಲ್ ಹಾಕಿವೆ.
ಹಿಜಾಬ್ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಒಂದು ವೇಳೆ ಹೇಳಿದ್ದರೂ ಪರಿಶೀಲನೆ ಮಾಡುತ್ತೇವೆ ಎಂದಷ್ಟೇ ಹೇಳಿದ್ದೇವೆ. ಅದರ ಸಾಧಕ-ಬಾಧಕಗಳನ್ನು ನೋಡಿ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಬಿಜೆಪಿ ರಾಜ್ಯದಲ್ಲಿ ಅನಗತ್ಯ ವಿವಾದ ಸೃಷ್ಟಿಸುತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಬರೋ ಮುನ್ನವೂ ಮುಸ್ಲಿಮರು ಹಿಜಾಬ್ ಧರಿಸಿಯೇ ಶಾಲೆ ಕಾಲೇಜುಗಳಿಗೆ ಬರುತ್ತಿದ್ದರು. ಆಗ ಯಾರಿಗೂ ಯಾವ ಸಮಸ್ಯೆಯೂ ಆಗಿಲ್ಲ. ಬಿಜೆಪಿ ಸರ್ಕಾರಕ್ಕೂ ಮುನ್ನ ಜೀವನ ಹೇಗಿತ್ತೋ ಈಗಲೂ ಹಾಗೇ ಸ್ವೀಕರಿಸಿ ಎಂದಿದ್ದಾರೆ.