ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾ ಪ್ರದೇಶದಲ್ಲಿ ಹಿಂದು ಶಿಕ್ಷಕಿಯೊಬ್ಬಳು ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿದ್ದಾಳೆ.
ಗುಂಢೇಟಿಗೆ ಬಲಿಯಾದ ಜಮ್ಮುವಿನ ಸಾಂಬಾ ನಿವಾಸಿಯಾಗಿದ್ದ ರಜನಿ ಭಲ್ಲಾ ಅವರು ಗೋಪಾಲ್ಪೋರಾದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರ ಏಕಾಏಕಿ ಶಾಲೆಗೆ ನುಗ್ಗಿ ದಾಳಿ ನಡೆಸಿದ ಉಗ್ರರು ಶಿಕ್ಷಕಿಯ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಕಾಶ್ಮೀರ ಪೋಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಪ್ರತಿಕ್ರಿಯಿಸಿರುವ ಪೋಲೀಸರು ಅಪರಾಧಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ ತಕ್ಕ ಶಿಕ್ಷೆ ನೀಡಲಾಗುತ್ತದೆ ಎಂದಿದ್ದಾರೆ.
ಇದು ಇತ್ತೀಚಿಗೆ ವರದಿಯಾಗಿರುವ ಮೂರನೇ ಪ್ರಕರಣವಾಗಿದ್ದು ಈ ಹಿಂದೆ ತಾಲೂಕಾ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ರಾಹುಲ್ ಭಟ್ ರನ್ನು ಕೊಲೆ ಮಾಡಲಾಗಿತ್ತು. ಮೊನ್ನೆಯಷ್ಟೇ ಕಿರುತರೆ ನಟಿ ಅಮ್ರೀನ್ ಭಟ್ ಮನೆಯ ಮೇಲೆ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಲಾಗಿತ್ತು. ಈಗ ಶಾಲಾ ಶಿಕ್ಷಕಿ ರಜನಿ ಭಲ್ಲಾರ ಮೇಲೆ ನಡೆದ ದಾಳಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಾಶ್ಮೀರಿ ಪಂಡಿತರು, ಹಿಂದುಗಳನ್ನು ಗುರಿಯಾಗಿಸಿ ಉದ್ದೇಶಿತ ಕೊಲೆ ನಡೆಸುವುದು ಮತ್ತೆ ಪ್ರಾರಂಭವಾಯಿತೇ ಎನ್ನುವಂತಾಗಿದೆ.