ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ಎಸ್ಎಸ್ ನೋಂದಣಿ ಮಾಡಿಸಿಕೊಳ್ಳಬೇಕು, ಕಾನೂನುಬದ್ಧವಾಗಿ ತೆರಿಗೆ ಪಾವತಿಸಬೇಕು ಎಂದು ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಬಹಿರಂಗ ಪತ್ರಕ್ಕೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ನೇರವಾಗಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕೇರಳದ ತ್ರಿಶ್ಶೂರ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಾಗವತ್, ಇದು ರಾಜಕೀಯ ಗಿಮಿಕ್. ನಮ್ಮ ಚಟುವಟಿಕೆಗಳು ಯಾವುದೇ ರಹಸ್ಯವಾಗಿಲ್ಲ ಎಂದು ಹೇಳಿದ್ದಾರೆ.
ಹಿಂದೂ ಧರ್ಮ ಎಲ್ಲಾದರೂ ನೋಂದಣಿಯಾಗಿದೆಯೇ? ಸರ್ಕಾರದ ಅನುದಾನ ಪಡೆಯುವವರಿಗೆ ನೋಂದಣಿ ಅಗತ್ಯವಾಗಬಹುದು. ಆದರೆ ಆರ್ಎಸ್ಎಸ್ ಅಂತಹ ಸಂಘಟನೆ ಅಲ್ಲ. 1950ರಲ್ಲೇ ನಮ್ಮ ಸಂವಿಧಾನವನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:
ಆರ್ಎಸ್ಎಸ್ನ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅಗತ್ಯವೇ ಇಲ್ಲ ಎಂದು ಹೇಳಿದ ಭಾಗವತ್, ದೇಶದಾದ್ಯಂತ ನಡೆಯುವ ಸಂಘದ ಚಟುವಟಿಕೆಗಳು ಸಂಪೂರ್ಣ ಪಾರದರ್ಶಕವಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.
ನಾವು ಕದ್ದು-ಮುಚ್ಚಿ ಯಾವುದೇ ಕೆಲಸ ಮಾಡುವುದಿಲ್ಲ. ನಮ್ಮ ಎಲ್ಲ ಕಾರ್ಯಕ್ರಮಗಳು ತೆರೆದ ಮೈದಾನಗಳಲ್ಲಿ ನಡೆಯುತ್ತವೆ. ಜನರನ್ನು ಆಹ್ವಾನಿಸಿ ಸಂಘದ ಬಗ್ಗೆ ಮುಕ್ತವಾಗಿ ತಿಳಿಸುತ್ತೇವೆ. ನಮ್ಮ ಸ್ವಯಂಸೇವಕರು ಪ್ರತಿದಿನ ಜನರ ನಡುವೆ ಇರುತ್ತಾರೆ. ಜನರು ನಮ್ಮನ್ನು ನೋಡುತ್ತಲೇ ಇರುತ್ತಾರೆ. ಹೀಗಿರುವಾಗ ನಾವು ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಪ್ರಿಯಾಂಕಾ ಪತ್ರಕ್ಕೆ ತಿರುಗೇಟು ನೀಡಿದ್ದಾರೆ.



