ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ತಮ್ಮ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ.
ಅಸ್ಸಾಂನ ವಿಧಾನಸಭೆಯಲ್ಲಿ ಮೇ 26 ರಂದು ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.
ಮೊದಲ ಸಂಪುಟ ಸಭೆಯಲ್ಲಿ ಯುಸಿಸಿ ಕರಡು ಮಸೂದೆಗೆ ಅನುಮೋದನೆ ನೀಡಿದ ಅವರು ಉತ್ತರಾಖಂಡ, ಗುಜರಾತ್ ಮತ್ತು ಗೋವಾದ ಮಾದರಿಯಂತೆ ಅಸ್ಸಾಂನ ಯುಸಿಸಿ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ಮದುವೆ, ವಿಚ್ಛೇದನ ಮತ್ತು ಲಿವ್-ಇನ್ ರಿಲೇಶನ್ಶಿಪ್ಗಳಂತಹ ನಾಗರಿಕ ವಿಷಯಗಳನ್ನು ಒಂದೇ ಕಾನೂನಿನ ಅಡಿಯಲ್ಲಿ ತರುವುದು ಮುಖ್ಯ ಉದ್ದೇಶವಾಗಿದೆ.
ಇದರ ನಡುವೆ ಅಸ್ಸಾಂನ ಬುಡಕಟ್ಟು ಸಮದಾಯಕ್ಕೆ ಭರವಸೆಯನ್ನು ನೀಡಿದ ಸಿಎಂ, ಬುಡಕಟ್ಟು ಜನಸಂಖ್ಯೆಯನ್ನು ಈ ಕಾನೂನಿನ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಲಾಗುವುದು. ಬುಡಕಟ್ಟು ಸಮುದಾಯಗಳ ಸಂಪ್ರದಾಯಗಳು ಮತ್ತು ಆಚರಣೆಗಳಿಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ತಿಳಿಸಿದರು.
ಯುಸಿಸಿ ಮಸೂದೆ ಅಡಿಯಲ್ಲಿ ಪ್ರತಿಯೊಂದು ವಿವಾಹವೂ ಸರ್ಕಾರದಲ್ಲಿ ನೋಂದಣಿಯಾಗಲೇಬೇಕು. ಲಿವ್-ಇನ್ ರಿಲೇಶನ್ಶಿಪ್ ನಲ್ಲಿ ಇರುವ ಜೋಡಿಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಅದೇ ರೀತಿ ವಿಚ್ಛೇದನ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ನ್ಯಾಯಯುತಗೊಳಿಸಲಾಗುವುದು. ಬಹುಪತ್ನಿತ್ವಕ್ಕೆ ಕಡಿವಾಣ ಹಾಕುವ ಗುರಿ ಹೊಂದಿದೆ.



