ಹೊಸದಿಗಂತ ವರದಿ ಕಲಬುರಗಿ:
ನಗರದ ಬ್ರಹ್ಮಪುರ ಉತ್ತರಾದಿ ಮಠದಲ್ಲಿ ಸತ್ಯಾತ್ಮ ಸೇನೆ ನೇತೃತ್ವದಲ್ಲಿ ಗುರುವಾರ ಸಾಮೂಹಿಕ ಉಪನಯನ ಕಾರ್ಯಕ್ರಮ ಅಭೂತಪೂರ್ವವಾಗಿ ಜರುಗಿತು.
ಉತ್ತರಾದಿ ಮಠದ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 131 ವಟುಗಳು ಉಪನಯನ ಮಾಡಿಸಿಕೊಂಡರು. ಉಪನಯನ ವಿಧಿವತ್ತಾಗಿ ನಡೆಸುವ ಉದ್ದೇಶದಿಂದ ಈ ಕಾರ್ಯದಲ್ಲಿ ನೂರು ಜನ ಅರ್ಚಕರು ಪಾಲ್ಗೊಂಡಿದ್ದರು.
ಎಲ್ಲ ವಟುಗಳಿಗೂ ಶ್ರೀಗಳು ಪ್ರತ್ಯೇಕ ಮಂತ್ರೋಪದೇಶ ಮಾಡಿದರು. ನಂತರ ವಟುಗಳಿಗೆ ಮುದ್ರಧಾರಣೆ ನೀಡಿ ಶ್ರೀಗಳು ಆಶೀರ್ವದಿಸಿದರು.
ಒಂದು ಉಪನಯನ ಮಾಡಬೇಕು ಎಂದರೆ ಕನಿಷ್ಠ 3 ಲಕ್ಷ ರೂ. ಖರ್ಚಾಗುತ್ತದೆ. ಆರ್ಥಿಕವಾಗಿ ದುರ್ಬಲರಾಗಿದ್ದ ಎಷ್ಟೋ ಕುಂಟುಬಗಳು ಮಕ್ಕಳ ಉಪನಯನ ಮಾಡಿರಲಿಲ್ಲ. ಸತ್ಯಾತ್ಮಸೇನೆ ಆಯೋಜಿಸಿದ್ದ ಉಚಿತ ಉಪನಯನ ಕಾರ್ಯಕ್ರಮದಿಂದ ಬಹಳಷ್ಟು ಜನರಿಗೆ ಅನುಕೂಲವಾಯಿತು. ಉಪನಯನ ಮಾಡಿಸಿಕೊಂಡ ಪ್ರತಿ ವಟುವಿಗೂ ಮಡಿ, ಸಂಧ್ಯಾವಂದನೆ ಕಿಟ್, ಸಂಧ್ಯಾವಂದನೆ ಪುಸ್ತಕಗಳು ಉಚಿತವಾಗಿ ನೀಡಲಾಯಿತು.
ಉತ್ತರಾದಿ ಮಠದಿಂದ ಲಕ್ಷ್ಮಿನರಸಿಂಹ ದೇವಸ್ಥಾನದ ವರೆಗೆ ಪೆಂಡಾಲ್ ಹಾಕಲಾಗಿದ್ದು, ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ತಾಪ ಹೆಚ್ಚಿರುವುದರಿಂದ ಭಕ್ತರಿಗೆ ತೊಂದರೆಯಾಗಬಾರದು ಎಂದು ನೀರು, ನೆರಳಿನ ವ್ಯವಸ್ಥೆ ಮಾಡಲಾಗಿತ್ತು.