ಹೊಸದಿಗಂತ ವರದಿ ಹುಬ್ಬಳ್ಳಿ:
ಎಲ್ಲರೂ ಹೇಗಿದ್ದಿರಿ…. ಕರ್ನಾಟಕಕ್ಕೆ ಬಂದು ಕನ್ನಡದಲ್ಲಿ ಮಾತನಾಡುತ್ತಿರುವುದು ನನ್ನ ಸೌಭಾಗ್ಯವೆಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಂಗೀತ ಅಕಾಡೆಮಿ ಹಾಗೂ ಧಾರವಾಡ ಅಂಚೆ ಕಚೇರಿ ವತಿಯಿಂದ ಪಂ. ಸವಾಯಿ ಗಂಧರ್ವ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಪಂಡಿತ ಭೀಮಸೇನ ಜೋಶಿ ಹಾಗೂ ಕುಮಾರ ಗಂಧರ್ವರ ನಾನು ದೊಡ್ಡ ಅಭಿಮಾನಿ. ಸಂಗೀತ, ಶಿಕ್ಷಣ, ಕಲೆ, ಸಂಸ್ಕೃತಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರವರು ಪಂಡಿತ ಭೀಮಸೇನ ಜೋಶಿ, ಸವಾಯಿ ಗಂಧರ್ವರು ಹಾಗೂ ಗಂಗೂಬಾಯಿ ಹಾನಗಲ್ ಎಂದರು.
ನಾವು ಎಲ್ಲಾ ರೀತಿಯ ಗುಲಾಮಗಿರಿಯನ್ನು ಬಿಡಬೇಕು ಎಂಬುದು ಮೋದಿ ಅವರ ಅಶಯ. ಅಕಾರದ ಅರ್ಥ ಸೇವೆ. ಅಂದರೆ, ಜನರ ಸೇವೆ. ಅಕಾರದ ಅರ್ಥವನ್ನು ಮೋದಿ ಅವರು ಬದಲಿಸಿದರು. ಇಂದು ನಾವು ನಮ್ಮ ಸಂಸ್ಕತಿ, ಸಂಸ್ಥೆ, ಭಾಷೆ, ಹೆಮ್ಮೆಯನ್ನು ಗುರುತಿಸುವ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುತ್ತಿದೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಧಾರವಾಡ ಜಿಲ್ಲೆಯ ಸುಪ್ರಸಿದ್ಧವಾಗಲೂ ಮಲ್ಲಿಕಾರ್ಜುನ ಮನಸೂರ, ಪಂಡಿತ ಭೀಮ ಸೇನ ಜೋಶಿ, ಬಸವರಾಜ ರಾಜಗುರು, ಗಂಗೂ ಬಾಯಿ ಹಾನಗಲ್ ಅವರಿಂದ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಸವಾಯಿ ಗಂಧರ್ವ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆಗೊಳಿಸಿದರು.
ಎಂ.ಎಂ. ಜೋಶಿ ನೇತ್ರಾಲಯದ ಸಂಸ್ಥಾಪಕ ಎಂ.ಎಂ.ಜೋಶಿ, ಸವಾಯಿ ಗಂಧರ್ವ ಅವರ ಮೊಮ್ಮಗ ಸೋಮನಾಥ ಜೋಶಿ, ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಡಾ. ರಾಜೇಂದ್ರ ಕುಮಾರ, ನಾರಾಯಣರಾವ್ ಹಾನಗಲ್, ಶೀಲಾ ದೇಶಪಾಂಡೆ ಇದ್ದರು.