ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ ನಟ ದಿಗಂತ್ ಆರೋಗ್ಯವಾಗಿದ್ದಾರೆ. ಹೀಗಾಗಿ ಯಾರು ಕೂಡ ಭಯಪಡುವ ಅಗತ್ಯವಿಲ್ಲ ಎಂದು ತಂದೆ ಕೃಷ್ಣಮೂರ್ತಿ ತಿಳಿಸಿದ್ದಾರೆ.
ವೈದ್ಯರೊಂದಿಗೆ ಸಮಾಲೋಚಿಸಿದ ಬಳಿಕ ಮಾತನಾಡಿದ ಕೃಷ್ಣಮೂರ್ತಿ, ಒಂದು ಆಪರೇಷನ್ ಮಾಡಬೇಕು ಎಂದು ಡಾಕ್ಟರ್ ತಿಳಿಸಿದ್ದಾರೆ. ಇದಾಗಿ ಒಂದೆರೆಡು ದಿನಗಳಲ್ಲಿ ಅವರು ನಡೆಯಬಹುದು. ಅದರಂತೆ ಯಾರು ಕೂಡ ಚಿಂತಿಸುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇನ್ನು ದಿಗಂತ್ ಅವರ ಕುತ್ತಿಗೆ ಭಾಗಕ್ಕೆ ಮಾತ್ರ ಗಾಯವಾಗಿದ್ದು, ಬೆನ್ನುಮೂಳೆಗೆ ಯಾವುದೇ ತೊಂದರೆಯಾಗಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ. ಹೀಗಾಗಿ ದಿಗಂತ್ಗೆ ಇನ್ಮುಂದೆ ನಡೆದಾಡಲು ಸಾಧ್ಯವಾಗುವುದಿಲ್ಲ. ಅಥವಾ ನಿಲ್ಲಲಾಗುವುದಿಲ್ಲ ಎಂಬಿತ್ಯಾದಿ ವದಂತಿಗಳಿಗೆ ಯಾರು ಕೂಡ ಕಿವಿಗೊಡಬೇಡಿ ಎಂದು ಕೃಷ್ಣಮೂರ್ತಿ ಅವರು ಮನವಿ ಮಾಡಿದರು.
ಕೆಲ ದಿನಗಳ ಹಿಂದೆ ದಿಗಂತ್ ಹಾಗೂ ಪತ್ನಿ ಆಂದ್ರಿತಾ ರೇ ತಮ್ಮ ಆಪ್ತರೊಂದಿಗೆ ಗೋವಾಗೆ ಪ್ರವಾಸ ಹೋಗಿದ್ದರು. ಈ ವೇಳೆ ಟ್ರೆಕ್ಕಿಂಗ್ ಸೇರಿದಂತೆ ಅನೇಕ ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿಯೇ ಅಲ್ಲೂ ಕೂಡ ಬ್ಯಾಕ್ ಫ್ಲಿಪ್ ಮಾಡಿದ್ದಾರೆ.
ಆದರೆ ದುರಾದೃಷ್ಟವಶಾತ್ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ದಿಗಂತ್ ಅವರ ಕುತ್ತಿಗೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಅವರ ಆಪ್ತರು ಗೋವಾದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತರಲಾಗಿದ್ದು, ಅದರಂತೆ ಇದೀಗ ದಿಗಂತ್ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.