ಹೊಸದಿಗಂತ ವರದಿ ವಿಜಯಪುರ:
ಕಾಂಗ್ರೆಸ್ನವರು ತಮ್ಮ ಸ್ವಾರ್ಥಕ್ಕೆ ಎಷ್ಟು ಸಲ ಸಂವಿಧಾನ ಬದಲಾವಣೆ ಮಾಡಿದ್ದಾರೆ ಎಂಬುದನ್ನು ಅವರೇ ಅರಿಯಲಿ. ಆದರೆ, ಬಿಜೆಪಿ ಯಾವತ್ತು ಹಾಗೇ ಮಾಡಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಶಂಖನಾದ ಅಭಿಯಾನದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು..ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಾಗುತ್ತಿದೆ ಎನ್ನುವುದು ಬರಿ ಸುಳ್ಳು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಾಗೆಲ್ಲ ಮಾಡಿಲ್ಲ. ಆದರೆ ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಎಸ್ಸಿ, ಎಸ್ಟಿ ಮೀಸಲಾತಿಯನ್ನು ಇನ್ನಷ್ಟು ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಇದ್ದ ಶೇ. 18 ರಷ್ಟಿನ ಮೀಸಲಾತಿಯನ್ನು ಶೇ. 24 ರಷ್ಟು ಸಂವಿಧಾನಾತ್ಮಕವಾಗಿ ಹೆಚ್ಚಳ ಮಾಡಲಾಗಿದೆ ಎಂದರು.
ಇನ್ನು ಡಾ. ಬಿ.ಆರ್. ಅಂಬೇಡ್ಕರ್ ನಿಧನ ವೇಳೆ ಅಂತ್ಯಕ್ರಿಯೆಗೆ ಕಾಂಗ್ರೆಸ್ ನವರು ಜಮೀನು ನೀಡಿಲ್ಲ. ರಾಜೀವ್ ಗಾಂಧಿ, ಸಂಜಯ್ ಗಾಂಧಿ, ಇಂದಿರಾ ಗಾಂಧಿ, ನೆಹರು ಸಾವಿರಾರು ಎಕರೆ ಜಮೀನು ಇಟ್ಟುಕೊಂಡಿದ್ದಾರೆ. ಆದರೆ, ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೆ ಒಂದು ಎಕರೆ ಭೂಮಿ ನೀಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನವನ್ನು ಅಂಬೇಡ್ಕರ್ ಅವರ ಇಚ್ಛೆಯಂತೆ ಬರೆಯಲು ಕಾಂಗ್ರೆಸ್ ಅವಕಾಶ ನೀಡಿಲ್ಲ. ಅಂಬೇಡ್ಕರ್ಗೆ ಕಾಂಗ್ರೆಸ್ ಭಾರತ ರತ್ನ ಕೊಡಲಿಲ್ಲ. ರಾಜೀವ್ ಗಾಂಧಿ ಭಾಷಣದಲ್ಲಿ ಕಾಲಕಾಲಕ್ಕೆ ಸಂವಿಧಾನ ತಿದ್ದುಪಡಿ ಮಾಡಬೇಕು ಎಂದಿದ್ದಾರೆ ಎಂದರು.