July 21, 2026
Tuesday, July 21, 2026
spot_img

ಈ ರೀತಿ ಹೇಳೋದು ಎಷ್ಟು ಸರಿ? ಮಹಿಳೆಯರು ರಾತ್ರಿ ಹೊರಗಡೆ ಓಡಾಡಬಾರದಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದ ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಕುರಿತಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ ಸಂವೇದನಾರಹಿತ ಹೇಳಿಕೆಗೂ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ಈಗ ಟಿಎಂಸಿ ಹಿರಿಯ ನಾಯಕ ಹಾಗೂ ಸಂಸದ ಸೌಗತ್ ರಾಯ್ ಅವರ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.

ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ 23 ವರ್ಷದ ವಿದ್ಯಾರ್ಥಿನಿ ಅಕ್ಟೋಬರ್ 10ರ ರಾತ್ರಿ ಸ್ನೇಹಿತನೊಂದಿಗೆ ಊಟಕ್ಕೆ ಹೋದ ನಂತರ ಕೈಗಾರಿಕಾ ಪ್ರದೇಶದ ಕಾಲೇಜು ಕ್ಯಾಂಪಸ್ ಸಮೀಪ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು. ಈ ಘಟನೆ ರಾಷ್ಟ್ರವ್ಯಾಪಕವಾಗಿ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ವಿರುದ್ಧ ಜನರ ಅಸಮಾಧಾನ ವ್ಯಕ್ತವಾಗಿದೆ.

ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಟಿಎಂಸಿ ಸಂಸದ ಸೌಗತ್ ರಾಯ್ ಅವರು, “ಇಂತಹ ಘಟನೆಗಳು ಬಂಗಾಳದಲ್ಲಿ ಅಪರೂಪ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬೇರೆ ಯಾವುದೇ ರಾಜ್ಯಕ್ಕಿಂತ ಉತ್ತಮವಾಗಿದೆ. ಆದರೆ ಮಹಿಳೆಯರು ತಡರಾತ್ರಿ ಕಾಲೇಜುಗಳಿಂದ ಹೊರಗೆ ಹೋಗಬಾರದು. ಏಕೆಂದರೆ ಪ್ರತಿಯೊಂದು ರಸ್ತೆಯಲ್ಲೂ ಪೊಲೀಸರು ಇರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಹಿಳೆಯರ ಮೇಲೆ ಹೊಣೆಗಾರಿಕೆಯನ್ನು ಹಾಕುವ ಬದಲು ಸರ್ಕಾರವು ಭದ್ರತಾ ಕ್ರಮಗಳನ್ನು ಬಲಪಡಿಸಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ದುರ್ಗಾಪುರ ಅತ್ಯಾಚಾರ ಪ್ರಕರಣ ಈಗ ಕಾನೂನು ಕ್ರಮಕ್ಕಿಂತ ಹೆಚ್ಚು ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !