ಹೊಸದಿಗಂತ ವರದಿ ಹುಬ್ಬಳ್ಳಿ:
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಮಂಗಳವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ನಿರ್ಧಾರ ಸಾಮೂಹಿಕವಾಗಿರುತ್ತದೆ ಹೊರತು ವ್ಯಕ್ತಿಗತವಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ತಿರುಗೇಟು ನೀಡಿದರು.
ನನಗೆ ಟಿಕೆಟ್ ನೀಡುವುದನ್ನು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಒಬ್ಬರೇ ನಿರ್ಣಯ ಮಾಡಿಲ್ಲ. ಬಿಜೆಪಿಯ ಸಂಸದೀಯ ಮಂಡಳಿ ನಿರ್ಣಯ ಮಾಡಿದೆ. ನನಗೆ ಜಗದೀಶ ಶೆಟ್ಟರ್ ಅವರು ಗುರುಗಳು. ಅವರು ನನ್ನನ್ನು ಬಿ.ಎಲ್.ಸಂತೋಷ್ ಅವರ ಮಾನಸ ಪುತ್ರ ಎಂದು ಯಾಕೆ ಹೇಳಿದರು ಎಂಬುದನ್ನು ಅವರನ್ನೇ ಕೇಳಿ. ಶೆಟ್ಟರ್ ಅವರಿಗೆ ಪಕ್ಷ ಎಲ್ಲ ಗೌರವ ಕೊಟ್ಟಿದೆ. ಕಳೆದ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದ ಟಿಕೆಟ್ ನನಗೆ ಹಂಚಿಕೆಯಾಗಿತ್ತು. ಕೊನೆಯಲ್ಲಿ ಬದಲಾವಣೆ ಮಾಡಿದರೂ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ತಕ್ಷಣ ಹಿಂದೆ ಸರಿದ್ದಿದ್ದೆ ಎಂದು ಹೇಳಿದರು.