ಹೊಸ ದಿಗಂತ ವರದಿ, ಬಳ್ಳಾರಿ:
ನಗರದ ರೈಲ್ವೆ ನಿಲ್ದಾಣಕ್ಕೆ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ರೀಜನಲ್ ಡೆಪುಟಿ ಮ್ಯಾನೇಜರ್ ಹರ್ಷಿತ್ ಕರೆ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಕೈಗೊಂಡಿರುವ ಎಸ್ಕಲೇಟರ್ ಸೌಲಭ್ಯ, ಸೇರಿದಂತೆ ವಿವಿಧ ಸೌಲಭ್ಯಗಳ ಕಾಮಗಾರಿಗಳನ್ನು ವೀಕ್ಷಿಸಿದರು. ಯಾವುದೇ ಕಾರಣಕ್ಕೂ ಕಾಮಗಾರಿ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು, ನಿರ್ಲಕ್ಷ್ಯ ವಹಿಸುವಂತಿಲ್ಲ ಎಂದು ಸ್ಥಳದಲ್ಲಿದ್ದ ರೈಲ್ವೆ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದರು.
ವಿವಿಧ ಬೇಡಿಕೆಗಳ ಮನವಿ: ಬಳ್ಳಾರಿ ನಗರದ ರೈಲ್ವೆ ನಿಲ್ದಾಣದಲ್ಲಿ ಕೈಗೊಂಡಿರುವ ಕೆಲಸಗಳನ್ನು ನಿಗಧಿ ಅವಧಿಯಲ್ಲಿ ಪೂರ್ಣಗೊಳಿಸಬೇಕು, ಮೊದಲು ಸಂಚರಿಸುತ್ತಿದ್ದ ಗುಂತಕಲ್ – ಹುಬ್ಬಳ್ಳಿ ರೈಲನ್ನು ಯಥಾವತ್ತಾಗಿ ಮೊದಲಿನಂತೆ ಸಂಚರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ನಾಲ್ಕು, ಐದು ಪ್ಲಾಟ್ ಫಾರ್ಮ್ ಗಳನ್ನು ನಿರ್ಮಿಸಬೇಕು, ಒಂದೇ ಭಾರತ್ ರೈಲು ಅತಿ ಶೀಘ್ರದಲ್ಲಿ ಬಳ್ಳಾರಿ ಮೂಲಕ ಸಂಚರಿಸುವ ವ್ಯವಸ್ಥೆಯಾಗಬೇಕು, ನಗರದ ಮೋತಿ ಸರ್ಕಲ್ ಬಳಿ ಸ್ಕೈ ವಾಕ್ ನಿರ್ಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ರೈಲ್ವೆ ಕ್ರೀಯಾ ಸಮೀತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಕೆ.ಎಂ.ಮಹೇಶ್ವರ ಸ್ವಾಮೀ, ಪದಾಧಿಕಾರಿಗಳಾದ ಕೋಳೂರು ಚಂದ್ರಶೇಖರ ಗೌಡ, ಎಚ್. ಕೆ. ಗೌರಿಶಂಕರ ಹಿರಿಯ ನ್ಯಾಯವಾದಿ ಮಹೇಂದ್ರ ನಾಥ್, ಬಿ.ಎಂ. ಎರಿಸ್ವಾಮಿ, ಡಾ. ಮಂಜುನಾಥ್, ಪ್ರತಾಪ್ ಗೌಡ, ಮಧುಸೂದನ ಗೌಡ, ಸೂರ್ಯ ಪ್ರಕಾಶ್, ಎನ್.ಸಿ. ವೀರಭದ್ರಪ್ಪ, ಎಲ್ಐಸಿಯ ಕೆ.ಎಂ. ಕೊಟ್ರೇಶ್, ರುದ್ರಮುನಿ ಸ್ವಾಮಿ, ವಸಂತ್ ರಾವ್, ಅಂದ್ರಳ್ ವೆಂಕಟ ರೆಡ್ಡಿ ಇತರರಿದ್ದರು.