ಹೊಸದಿಗಂತ ವರದಿ , ಚಿತ್ರದುರ್ಗ:
ಜಗಳದ ನೆಪದಲ್ಲಿ ಗಂಡನನ್ನು ಕೊಲೆ ಮಾಡಿದ ಆರೋಪಿ ಪತ್ನಿಯನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ನಗರದ ಕೆಳಗೋಟೆ ಪ್ರದೇಶದ ಒಂದನೇ ಕ್ರಾಸ್ನಲ್ಲಿ ಡಾ. ವಿಜಯ ಕ್ಲಿನಿಕ್ ಆಸ್ಪತ್ರೆಯ ಪಕ್ಕದಲ್ಲಿ ವಾಸವಿರುವ ಜಗದೀಶ (38) ಈಗ್ಗೆ ಸುಮಾರು ಒಂದೆರೆಡು ವರ್ಷಗಳಿಂದ ಅನಾರೋಗ್ಯದ ಕಾರಣ ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದರು. ಈತನ ಹೆಂಡತಿ ನೇತ್ರಾವತಿ ತನ್ನ ಗಂಡನು ಕೂಲಿ ಕೆಲಸಕ್ಕೂ ಹೋಗುವುದಿಲ್ಲ ಎಂದು ಪದೇ ಪದೇ ತನ್ನ ಗಂಡ ಜಗದೀಶನೊಂದಿಗೆ ಜಗಳವಾಡುತ್ತಿದ್ದರು.
ಇದೇ ವಿಚಾರವಾಗಿ ಮಂಗಳವಾರ ರಾತ್ರಿ ತನ್ನ ಗಂಡ ಜಗದೀಶನೊಂದಿಗೆ ಪತ್ನಿ ನೇತ್ರಾವತಿ ಜಗಳ ಮಾಡಿದರು. ಅನಾರೋಗ್ಯದಿಂದ ಮಲಗಿದ್ದ ತನ್ನ ಗಂಡನನ್ನು ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಬೆಳಗಿನ ಜಾವ ಆತನ ಬಾಯಿಗೆ ಟವಲ್ ಕಟ್ಟಿ, ಎದೆಯನ್ನು ತುಳಿದು, ಕುತ್ತಿಗೆ ಹಿಸುಕಿ, ಬಿದಿರು ಕೋಲಿನಿಂದ ಆತನ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಕೊಲೆಯಾದ ಜಗದೀಶನ ಸಂಬಂಧಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬಡಾವಣೆ ಪೊಲೀಸರು ಬುಧವಾರ ಆರೋಪಿ ನೇತ್ರವತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ